ವಿಜಯಪುರ,ಫೆಬ್ರವರಿ,3,2025 (www.justkannada.in): ನಾಳೆ ನಾನು ಮತ್ತು ನಮ್ಮ ತಂಡ ದೆಹಲಿಗೆ ಹೋಗುತ್ತೇವೆ. ಬಿಎಸ್ ವೈ ಹಾಗೂ ಆತನ ಮಗನ ಕರ್ಮಕಾಂಡಗಳ ಬಗ್ಗೆ ಹೈಕಮಾಂಡ್ ಗೆ ವಿವರಣೆ ನೀಡುತ್ತೇವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿಯಲ್ಲಿ ಕುಟುಂಬಶಾಹಿ ಕೊನೆಗೊಳ್ಳಬೇಕು . ಭ್ರಷ್ಟಾಚಾರಿ ಕುಟುಂಬವನ್ನು ರಾಜ್ಯದಿಂದ ಕಿತ್ತೊಗೆಯಬೇಕು. ಹಿಂದುತ್ವ ಇರುವಂತಹ ವ್ಯಕ್ತಿಗಳ ಕೈಯಲ್ಲಿ ನಾಯಕತ್ವ ಇರಬೇಕು. ಬಿಜೆಪಿಯಲ್ಲಿ ಮಹಾಭ್ರಷ್ಟ ಕುಟುಂಬ ಬೇಕಾ, ಪಕ್ಷದ ಕಾರ್ಯಕರ್ತರು ಬೇಕಾ? ಎಂದು ಪ್ರಶ್ನಿಸಿದರು.
ಇನ್ನು ಬಿವೈ ವಿಜಯೇಂದ್ರ ಅವರು ಚುನಾವಣೆ ನಡೆದರೇ ಮತ್ತೆ ರಾಜ್ಯಾಧ್ಯಕ್ಷರಾಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಶಾಸಕ ಯತ್ನಾಳ್, ಠೇವಣಿ ಕಳೆದುಕೊಳ್ಳುವವನು ಕೂಡ ನಾನೇ ಗೆಲ್ಲುತ್ತೇನೆ ಅಂತಾನೆ. ಈಗ ಹೈಕಮಾಂಡ್ನಲ್ಲಿ ಮೂರು ವಿಷಯಗಳು ಸ್ಪಷ್ಟವಾಗಬೇಕು. ಕುಟುಂಬ ರಾಜಕಾರಣದಿಂದ ಬಿಜೆಪಿ ಮುಕ್ತವಾಗಬೇಕು. ನಾಳೆ ದೆಹಲಿಗೆ ತೆರಳುವ ನಿಯೋಗ ದೊಡ್ಡದಿದೆ. ವಿಜಯೇಂದ್ರ ಮುಂದುವರಿಸಿದರೆ ಹೀನಾಯ ಸ್ಥಿತಿ ಎಂದು ಗೊತ್ತಾಗಿದೆ ಎಂದರು.
Key words: BJP, high command, BSY, MLA, Yatnal