ಮೈಸೂರು, ಮಾರ್ಚ್,22,2025 (www.justkannada.in): ದಾನಗಳಲ್ಲಿ ಶ್ರೇಷ್ಠ ದಾನ ವಿದ್ಯಾದಾನ ಎನ್ನುವುದು ಪ್ರತೀತಿ. ಅದಕ್ಕಾಗಿ ನಮ್ಮ ಮೈಸೂರು ಒಡೆಯರ್ ಸಂಸ್ಥಾನ ಶಿಕ್ಷಣಕ್ಕಾಗಿ ಹೆಚ್ಚು ಒತ್ತು ನೀಡುತ್ತಿತ್ತು. ಇದೇ ಕಾರಣಕ್ಕೆ ಮೈಸೂರು ವಿಶ್ವದ ಪ್ರಮುಖ ವಿದ್ಯಾನಗರಿಗಳಲ್ಲಿ ಒಂದಾಗಿದೆ. ಇಂಥ ಮೈಸೂರಿನ ಸಂಸ್ಥೆಯಾಗಿರುವ “ಕಲಿಸು” ಫೌಂಡೇಶನ್ ಮಕ್ಕಳಿಗೆ ಹಾಗೂ ಯುವ ಸಮೂಹಕ್ಕೆ ಜ್ಞಾನಾರ್ಜನೆ ಮಾಡಲು ಮುಂದಾಗಿ, ನವದೆಹಲಿಯಲ್ಲಿ ಗ್ರಂಥಾಲಯವನ್ನು ಆರಂಭಿಸಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ “ಕಲಿಸು” ಫೌಂಡೇಶನ್ ನ 125ನೇ ಗ್ರಂಥಾಲಯಕ್ಕೆ ಚಾಲನೆ ನೀಡಿದ ನಂತರ ಸಂಸದ ಯದುವೀರ್ ಭಾಷಣ ಮಾಡಿದರು.
ಕಲಿಸು ಸಂಸ್ಥೆ ಕಳೆದ ಕೆಲವು ವರ್ಷಗಳಿಂದ ಜ್ಞಾನ ಹರಡುವ ಯಜ್ಞದಲ್ಲಿ ತೊಡಗಿದೆ. ಈ ಮಹತ್ಕಾರ್ಯದಲ್ಲಿ ನಾನೂ ಕೂಡ ಭಾಗಿಯಾಗಿದ್ದೇನೆ. ಈ ಸಂಸ್ಥೆಯ ರಾಯಭಾರಿಯಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ಪುಸ್ತಕ ಸಿಗುವಂತೆ ಮಾಡಲಾಗುತ್ತಿದೆ. ನಿಜಕ್ಕೂ ಇದೊಂದು ಪುಣ್ಯದ ಕೆಲಸ ಎಂದು ತಿಳಿಸಿದ್ದಾರೆ.
ವ್ಯಾಪ್ತಿ ವಿಸ್ತರಿಸಿದ ಕಲಿಸು
ಗ್ರಾಮೀಣ ಭಾಗದಲ್ಲಿ ಗ್ರಂಥಾಲಯ (ಲೈಬ್ರರಿ) ಆರಂಭಿಸುವ ಮೂಲಕ ಯುವ ಸಮೂಹದ ಜ್ಞಾನ ಹೆಚ್ಚಿಸಲಾಗುತ್ತಿದೆ. ನಮ್ಮ ಮೈಸೂರಿನ “ಕಲಿಸು” ಫೌಂಡೇಷನ್ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಈ ಲೈಬ್ರರಿ ಆರಂಭಿಸಿರುವುದು ಸ್ವಾಗತಾರ್ಹ. ಈ ನಿಟ್ಟಿನಲ್ಲಿ ಸಂಸ್ಥಾಪಕರಾದ ನಿಖಿಲೇಶ್ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಯದುವೀರ್ ತಿಳಿಸಿದರು.
ನವದೆಹಲಿಯ ಗೋಲ್ ಮಾರುಕಟ್ಟೆಯ ಅಟಲ್ ಆದರ್ಶ್ ಬೆಂಗಾಲಿ ಬಾಲಿಕಾ ವಿದ್ಯಾಲಯದಲ್ಲಿ ತಲೆ ಎತ್ತಿರುವ 125ನೇ ಗ್ರಂಥಾಲಯದಲ್ಲಿ ಸಾವಿರಾರು ಪುಸ್ತಕಗಳು ದೊರೆಯಲಿದೆ. ಇದನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಸತ್ಪ್ರಜೆಗಳಾಗಿ ದೇಶಕ್ಕೆ, ನಾಡಿಗೆ ಕೊಡುಗೆ ನೀಡಬೇಕು ಎಂದು ಯದುವೀರ್ ಒಡೆಯರ್ ಕರೆ ನೀಡಿದರು.
ಕಲಿಸು ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಿದ್ಧ: ಬಾನ್ಸುರಿ
ನವದೆಹಲಿಯ ಸಂಸದೆಯಾಗಿರುವ ಬಾನ್ಸುರಿ ಸ್ವರಾಜ್ ಮಾತನಾಡಿ, ಮಕ್ಕಳಿಗಾಗಿ ಲೈಬ್ರರಿ ಆರಂಭಿಸಿರುವ ಮೈಸೂರು ಮೂಲದ ಕಲಿಸು ಸಂಸ್ಥೆಗೆ ನನ್ನ ಶುಭ ಹಾರೈಕೆಗಳು. ಈ ಸಂಸ್ಥೆಯ ಸರ್ಕಾರ ಮಾಡುವ ಕೆಲಸವನ್ನು ಮಾಡುತ್ತಿದೆ ಎಂದರು.
“ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ನಾವು “ಕಲಿಸು” ಸಂಸ್ಥೆ ಒಟ್ಟಾಗಿ ಕೈ ಜೋಡಿಸಲು ಉತ್ಸುಕರಾಗಿದ್ದೇವೆ. ಮತ್ತು ಶೀಘ್ರದಲ್ಲೇ “ಕಲಿಸು” ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಳ್ಳಲು ಮುಂದಾಗುತ್ತೇವೆ ಎಂದು ತಿಳಿಸಿದರು.
ನಮ್ಮ ದೆಹಲಿಯ ಮಕ್ಕಳಿಗಾಗಿ ಉತ್ತಮ ಪುಸ್ತಕಗಳು ದೊರೆಯುವಂತೆ ಮಾಡಿದ್ದು ಸ್ವಾಗತಾರ್ಹ. ಇಂಥ ಲೈಬ್ರರಿಗಳು ಇನ್ನಷ್ಟು ಆರಂಭವಾಗಲಿ. ಸಂಸ್ಥಾಪಕರಿಗೆ ಹಾಗೂ ಇಡೀ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಬಾನ್ಸುರಿ ಸ್ವರಾಜ್ ತಿಳಿಸಿದರು.
ನಂತರ ಯದುವೀರ್ ಒಡೆಯರ್ ಹಾಗೂ ಬಾನ್ಸುರಿ ಸ್ವರಾಜ್ ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಸಂವಾದ ನಡೆಸಿ, ಭವಿಷ್ಯದ ಯೋಜನೆಗಳು, ಹವ್ಯಾಸ, ಮುಂದಿನ ಗುರಿ ಹಾಗೂ ಇಷ್ಟದ ವಿಷಯ ಹಾಗೂ ಕ್ರೀಡೆ ಬಗ್ಗೆ ಚರ್ಚಿಸಿದರು.
“ಕಲಿಸು” ಸಂಸ್ಥೆಯ ಕನಸು ಆಗಲಿದೆ ನನಸು: ನಿಖಿಲೇಶ್
“ಕಲಿಸು” ಫೌಂಡೇಶನ್ ಸಂಸ್ಥಾಪಕರು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಿಖಿಲೇಶ್ ಇದೇ ಸಂದರ್ಭದಲ್ಲಿ ಮಾತನಾಡಿ, ಗ್ರಂಥಾಲಯಗಳನ್ನು ಆರಂಭಿಸುವ ಅಭಿಯಾನದ ಕುರಿತು ವಿವರಿಸಿದರು.
ಈಗಾಗಲೇ ಈ ಅಭಿಯಾನ ಕೈಗೊಳ್ಳಲಾಗಿದೆ. ಇದುವರೆಗೆ 124 ಗ್ರಂಥಾಲಯಗಳನ್ನು ಆರಂಭಿಸಲಾಗಿದೆ. ಈಗ 125ನೇ ಗ್ರಂಥಾಲಯಕ್ಕೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಚಾಲನೆ ನೀಡಲಾಗಿದೆ. ಇದಕ್ಕಾಗಿ ನಮ್ಮ ಸಂಸದರೂ, ನಮ್ಮ ಸಂಸ್ಥೆಯ ರಾಯಭಾರಿಗಳೂ ಆಗಿರುವ ಯದುವೀರ್ ಒಡೆಯರ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಅದೇ ರೀತಿ ರಾಷ್ಟ್ರ ರಾಜಧಾನಿಯಲ್ಲಿ ಗ್ರಂಥಾಲಯ ಆರಂಭಿಸಲು ನೆರವು ನೀಡಿದ ಸಂಸದೆಯಾಗಿರುವ ಬಾನ್ಸುರಿ ಸ್ವರಾಜ್ ಅವರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ರಾಜ ಮಹಾರಾಜರ ಕಾಲದಿಂದಲೂ ಮೈಸೂರಿನಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಹಾಗೂ ಗ್ರಾಮೀಣ ಭಾಗದ ಮಕ್ಕಳಿಗೆ ಹೆಚ್ಚು ಪುಸ್ತಕಗಳು ದೊರೆಯಬೇಕು ಎಂಬ ಉದ್ದೇಶದಿಂದ “ಕಲಿಸು” ಫೌಂಡೇಶನ್ ಆರಂಭಿಸಲಾಯಿತು ಎಂದರು.
ಇದುವರೆಗೆ ಗ್ರಂಥಾಲಯಗಳಿಗೆ ಸಾವಿರಾರು ಪುಸ್ತಕಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ದೊಡ್ಡಮಟ್ಟಕ್ಕೆ ಕೊಂಡೊಯ್ದು ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡುವುದು “ಕಲಿಸು” ಸಂಸ್ಥೆಯ ಕನಸು ಆಗಿದೆ. ಸಂಸದರು ಹಾಗೂ ನಿಮ್ಮೆಲ್ಲರ ಹಾರೈಕೆ ಇದ್ದರೆ ಇದು ಕೂಡ “ನನಸು” ಆಗುತ್ತದೆ ಎಂದು ನಿಖಿಲೇಶ್ ವಿವರಿಸಿದ್ದಾರೆ.
ನವದೆಹಲಿಯ ಲೈಬ್ರರಿಯಲ್ಲಿ 1500 ಪುಸ್ತಕಗಳನ್ನು ಒದಗಿಸಲಾಗಿದೆ. ಇದರಿಂದ 1400 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಸಂಸ್ಥಾಪಕರಾದ ನಿಖಿಲೇಶ್ ಮಾಹಿತಿ ನೀಡಿದ್ದಾರೆ.
125ನೇ ಲೈಬ್ರರಿ, 2.5 ಲಕ್ಷ, ಪುಸ್ತಕ, 25 ಸಾವಿರ ವಿದ್ಯಾರ್ಥಿಗಳಿಗೆ ನೆರವು
ಕಲಿಸು ಸಂಸ್ಥೆ ಈಗ ಎರಡನೇ ದಶಕಕ್ಕೆ ಕಾಲಿಟ್ಟಿದೆ. ಕಳೆದ ಹಲವಾರು ವರ್ಷಗಳಿಂದ ನಿರಂತರ ವಿದ್ಯಾದಾನದಲ್ಲಿ ತೊಡಗಿಕೊಂಡಿರುವ ಸಂಸ್ಥೆಯ 125ನೇ ಲೈಬ್ರರಿ ಈಗ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ತಲೆ ಎತ್ತಿದೆ.
ಇದುವರೆಗೆ “ಕಲಿಸು” ಸಂಸ್ಥೆಯ ವತಿಯಿಂದ ಲೈಬ್ರರಿಗೆ 2.5 ಲಕ್ಷ, ಪುಸ್ತಕಗಳನ್ನು ನೀಡಲಾಗಿದೆ. ಇದರಿಂದ 25 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಲಾಭ ಪಡೆದುಕೊಂಡಿದ್ದಾರೆ. ಇಂಥ ನಿಸ್ವಾರ್ಥ ಹಾಗೂ ಮಹತ್ಕಾರ್ಯ ನಡೆಸುತ್ತಿರುವ “ಕಲಿಸು” ಸಂಸ್ಥೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುವುದು ನನ್ನ ಮುಖ್ಯ ಗುರಿ ಎಂದು ನಿಖಿಲೇಶ್ ತಮ್ಮ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದ್ದಾರೆ.
Key words: Mysore, Kalisu institution, knowledge, children, MP, Yaduveer