ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಸಂಸದ ಯದುವೀರ್ ಆಗ್ರಹ

ಮೈಸೂರು, ಅಕ್ಟೋಬರ್,2,2024 (www.justkannada.in): ಮುಡಾ‌ ಹಗರಣ  ಸಂಬಂಧ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಗ್ರಹಿಸಿದ್ದಾರೆ.

ಈ ಕುರಿತು ಇಂದು ಮಾಧ್ಯಮಳಗಳ ಜೊತೆ ಮಾತನಾಡಿದ ಸಂಸದ ಯದುವೀರ್ ,  ಸೈಟ್ ವಾಪಸ್ ಕೊಟ್ಟಿರುವುದು ನೋಡಿದರೇ ತಪ್ಪಾಗಿದೆ ಅಂತಾನೆ ಅರ್ಥ. ಸೈಟ್ ಗೆ ಇರುವ ವ್ಯಾಲ್ಯುಗಿಂತ ಐದಾರು ಪಟ್ಟು ಹಣ ಕೇಳಿದರು. ಸಿಎಂ ಅವರ ಹೆಸರೇ ಖುದ್ದು‌ ಪ್ರಕರಣದಲ್ಲಿ ಕೇಳಿ ಬಂದಿದೆ. ಆ ಕಾರಣಕ್ಕೆ ಸೂಕ್ತ ತನಿಖೆ ಆಗಲೇಬೇಕು. ಸಿಎಂ  ಸಿದ್ದರಾಮಯ್ಯ ಕೂಡಲೇ  ರಾಜೀನಾಮೆ ನೀಡಲೇಬೇಕು. ಇದೊಂದು ಸಿಎಂಗೆ ಕಪ್ಪುಚುಕ್ಕೆ ತರುವ ವಿಚಾರ. ಅವರು ದುರಾಡಳಿತ ಮಾಡಿದ್ದಾರೆ. ನೇರವಾಗಿ ತಪ್ಪು ಮಾಡಿರುವ ಕಾರಣ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.

ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಾರೆ. ಸಿಎಂ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ವಾಲ್ಮೀಕಿ ಹಗರಣದಲ್ಲೂ ಕೂಡ ತಪ್ಪಾಗಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಲೇಬೇಕು. ಸಿಎಂ ಪತ್ನಿಯನ್ನ ರಾಜಕೀಯಕ್ಕೆ ತಂದಿಲ್ಲ. ಮುಖ್ಯಮಂತ್ರಿಯಾಗಲಿ, ಮಹಿಳೆಯಗಾಗಲಿ , ಯಾರೇ ಆಗಲಿ ಆರೋಪ ಬಂದಾಗ ಎದುರಿಸಬೇಕು. ಅವರ ಮೇಲೆ ಆರೋಪ ಬಂದಿದೆ ಹಾಗಾಗಿ ಅವರ ಪತ್ನಿ ತನಿಖೆಯಲ್ಲಿ ಭಾಗಿಯಾಗಲೇಬೇಕು. ಮುಡಾದ‌ ಮೂಲ ಉದ್ದೇಶ ಬಡವರಿಗೆ ಸೈಟ್ ಸಿಗಬೇಕು ಎಂಬುದು. ಆದರೆ ಅದು ಒಂದು ವರ್ಗಕ್ಕೆ ಲಾಭ ಆಗುತ್ತಿದೆ. ಹಾಗಾಗಿ ಸಮಗ್ರ ತನಿಖೆ ಆಗಬೇಕು ಎಂದು ಹೇಳಿದರು.

ಸಿಎಂ ಮೊದಲೇ ಸೈಟ್ ಕೊಟ್ಟಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಯದುವೀರ್, ಈಗ ಏನಾಗಿದೆ? ಏನಾಗಿಲ್ಲ ಅಂತ ಪರಾಮರ್ಶೆ ಮಾಡುವ ಸಂದರ್ಭವಲ್ಲ. ತಪ್ಪಂತೂ ಆಗಿದೆ , ಅದನ್ನ ಅವರೇ ಒಪ್ಪಿಕೊಂಡಿದ್ದಾರೆ. ಅವರ ಕೈ ಹಾಕಿದ್ದಾರಾ ನೋಡಬೇಕಿದೆ. ಹೀಗಾಗಿ ತಕ್ಷಣ ರಾಜೀನಾಮೆ ನೀಡಲೇಬೇಕು ಎಂದು ಆಗ್ರಹಿಸಿದರು.

ದಸರಾದಲ್ಲಿ ಪಾಲ್ಗೊಳ್ಳುವ ವಿಚಾರ ಅದು ಅವರ ತೀರ್ಮಾನ. ಜವಾಬ್ದಾರಿ ಸ್ಥಾನದಲ್ಲಿರುವ ಕಾರಣ ಹಗರಣದಲ್ಲಿ ಸಿಲುಕಿರುವ ಕಾರಣ ಅವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಸಂಸದ ಯದುವೀರ್ ತಿಳಿಸಿದರು.

ತಾಯಿ ಚಾಮುಂಡೇಶ್ವರಿ ಬೆಟ್ಟದ ಪ್ರಾಧಿಕಾರ ವಿಚಾರ ಕುರಿತು ಪ್ರತಿಕ್ರಿಯಿಸಿದ ಯದುವೀರ್, ಆ ವಿಚಾರ ತಾಯಿ ಚಾಮುಂಡಿಗೆ ಬಿಟ್ಟಿದ್ದು. ನಾವು ಕಾನೂನು, ಸಂವಿಧಾನಾತ್ಮಕವಾಗಿ ಮಾಡುತ್ತೇವೆ. ಅದು ತಾಯಿ ಚಾಮುಂಡಿ ತಾಯಿಯೇ ನಿರ್ಧಾರ ಮಾಡುತ್ತಾಳೆ ಎಂದರು.

Key words: MP Yaduveer, demands, resignation, CM Siddaramaiah