ಮುಡಾದಲ್ಲಿ ಹೆಚ್.ಡಿಕೆ ನಿವೇಶನ ಪಡೆದಿದ್ದಾರೆಂಬ ಎಂ. ಲಕ್ಷ್ಮಣ್ ಆರೋಪ ನಿರಾಧಾರ- ಸಾ.ರಾ ಮಹೇಶ್

ಮೈಸೂರು,ಜುಲೈ,24,2024 (www.justkannada.in):  ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಕೂಡ ಮುಡಾದಲ್ಲಿ ನಿವೇಶನ ಪಡೆದಿದ್ದಾರೆ. ಕುಮಾರಸ್ವಾಮಿ ಹಾಗೂ ಅವರ ಕುಟುಂಬ ಸದಸ್ಯರು ನಿವೇಶನಗಳನ್ನು ಪಡೆದಿದ್ದಾರೆಂಬ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಆರೋಪ ನಿರಾಧಾರ ಎಂದು ಮಾಜಿ ಸಚಿವ ಸಾ ರಾ ಮಹೇಶ್ ಸ್ಪಷ್ಟನೆ ನೀಡಿದರು.

ಮುಡಾ ಬಹುಕೋಟಿ ಹಗರಣ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಸಾ.ರಾ ಮಹೇಶ್, ಮುಡಾದಲ್ಲಿ ಕುಮಾರಸ್ವಾಮಿ ಹಾಗೂ ಅವರ ಕುಟುಂಬ ಸದಸ್ಯರ ಹೆಸರಿನಲ್ಲಿ ಯಾವುದೇ ನಿವೇಶನ ಪಡೆದಿಲ್ಲ‌. 1985ರಲ್ಲಿ ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದರೂ ಮಂಜೂರಾಗಿಲ್ಲ. ಅವರು ಸಿಎಂ ಆಗಿದ್ದಾಗಲೂ ಅಧಿಕಾರ, ಪ್ರಭಾವ ಬಳಸಿಕೊಂಡು ನಿವೇಶನ ಪಡೆದಿಲ್ಲ. ಈ ಬಗ್ಗೆ ಕಾಂಗ್ರೆಸ್ ನಾಯಕರು ಇಲ್ಲಸಲ್ಲದ ಆರೋಪಗಳನ್ನು ಮಾಡುವುದನ್ನು ನಿಲ್ಲಿಸಬೇಕು ಎಂದರು.

ಮುಡಾದಲ್ಲಿ ಬಹುಕೋಟಿ ಹಗರಣ ಬೆಳಕಿಗೆ ಬಂದ ಬಳಿಕ ರಾಜ್ಯ ಸರ್ಕಾರ ಮಾಡಿರುವ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದ ಸಾ. ರಾ ಮಹೇಶ್, ಸರ್ಕಾರದ ಮುಂದಿನ ಆದೇಶದವರೆಗೆ ಮುಡಾದಲ್ಲಿ ಯಾವುದೇ ಕೆಲಸ‌ ಕಾರ್ಯಗಳು ನಡೆಯದಂತೆ ತಡೆಯೊಡ್ಡಲಾಗಿದೆ. ಪರಿಣಾಮ ಮುಡಾದಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಇದರಿಂದ ಮುಡಾಗೆ ಬರುವ ಜನರು ತೊಂದರೆ ಅನುಭವಿಸುವಂತಾಗಿದೆ. ಯಾರೋ ಮಾಡಿದ ತಪ್ಪಿಗೆ ಮತ್ಯಾರೋ ತೊಂದರೆ ಪಡುವಂತಾಗಿದೆ. ಸರ್ಕಾರದ ಆದೇಶ ಎತ್ತಿಗೆ ಜ್ವರ ಬಂದರೇ ಎಮ್ಮೆಗೆ ಬರೆ ಹಾಕಿದಂತಾಗಿದೆ ಎಂದು ಹರಿಹಾಯ್ದರು.

ನಾಲೆ ನೀರು ಕದ್ದರೆ 2 ವರ್ಷ ಜೈಲು, 2 ಲಕ್ಷ ದಂಡ ವಿಧೇಯಕ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಾ.ರಾ ಮಹೇಶ್, ಈ ವಿಧೇಯಕ ಮಂಡನೆ ಮಾಡಬೇಡಿ. ರೈತರು ಮೊದಲೇ ಸಂಕಷ್ಟದಲ್ಲಿದ್ದಾರೆ. ನಾಲೆಗೆ ಕಾನೂನು ಬಾಹಿರವಾಗಿ ನೀರಿನ ಪೈಪ್ ಲೈನ್ ಹಾಕುವುದು ತಡೆ ಎಂದಿದ್ದಾರೆ. ಜಮೀನು ಪಕ್ಕದಲ್ಲಿರುವ ನಾಲೆಯಿಂದ ನೀರು ತೆಗೆದುಕೊಂಡರೆ ತಪ್ಪೇನು? ಬರ, ಅತಿವೃಷ್ಠಿಯಿಂದ ಬಳಲಿರುವ ರೈತರಿಗೆ  ಗಾಯದ ಮೇಲೆ ಬರೆ ಹಾಕುವ ಕೆಲಸ ಮಾಡಬೇಡಿ ಎಂದು  ಕಾಂಗ್ರೆಸ್ ಸರ್ಕಾರಕ್ಕೆ ಮನವಿ ಮಾಡಿದರು.

Key words: MUDA, HDK, site, M. Laxman, SA.RA Mahesh