ಮುಡಾ ಹಗರಣ ಸಿಬಿಐಗೆ ವಹಿಸಿ: ಇಲ್ಲದಿದ್ರೆ ಹಳ್ಳ ಹಿಡಿಸುತ್ತಾರೆ- ಹೆಚ್.ವಿಶ್ವನಾಥ್

ಮೈಸೂರು,ಜುಲೈ,9,2024 (www.justkannada.in): ಮುಡಾ ಹಗರಣೌನ್ನ ಸಿಬಿಐ ತನಿಖೆಗೆ ವಹಿಸಿ. ಇಲ್ಲದಿದ್ರೇ ಪ್ರಕರಣವನ್ನ ಹಳ್ಳ ಹಿಡಿಸುತ್ತಾರೆ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಆಗ್ರಹಿಸಿದರು.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ವಿಶ್ವನಾಥ್,  ಈಗಾಗಲೇ ಐಎಎಸ್ ಆಫೀಸರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ವರದಿ ಬರುವುದಕ್ಕೂ ಮುನ್ನ ಮುಡಾ ಅಧ್ಯಕ್ಷ ಮರಿಗೌಡ,ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ ಸಮರ್ಥಸಿಕೊಳ್ಳುತ್ತಿದ್ದಾರೆ. ತನಿಖೆ ಸಂಸ್ಥೆ ಮೇಲೆ ಗೌರವ ಇಲ್ಲವೇ ನಿಮಗೆ.? ಏನಿದು ಹುಡುಗಾಟ.? ಮಹದೇವಪ್ಪ ಒಬ್ಬ ಕ್ಯಾಬಿನೆಟ್ ಮಿನಿಸ್ಟರ್ ಹಾಗಿ ಈ ರೀತಿ ಹೇಳಿದ್ರೆ ತನಿಖೆ ಯಾವ ರೀತಿ ಮಾಡಬೇಕು. ನೀವು ನಿಮ್ಮ ಕಾಂಗ್ರೆಸ್ ಎಂಎಲ್ಎ ಗಳು ತನಿಖೆ ದಿಕ್ಕು ತಪ್ಪುಸುವ ಕೆಲಸ ಮಾಡುತ್ತಿದ್ದಾರೆ. ಅನಾವಶ್ಯಕವಾಗಿ ಮಾತನಾಡುವುದನ್ನ ನಿಲ್ಲಿಸಬೇಕು ಎಂದು ವಾಗ್ದಾಳಿ ನಡೆಸಿದರು.

ಮಡದಿ ಹೆಸರಿನಲ್ಲಿ ಬದಲಿ ನಿವೇಶನ ಪಡೆದ ಆರೋಪಕ್ಕೆ ಸ್ಪಷ್ಟನೆ

ಇನ್ನು ಹೆಚ್.ವಿಶ್ವನಾಥ್ ಮಡದಿ ಹೆಸರಿನಲ್ಲಿ ಬದಲಿ ನಿವೇಶನ ಪಡೆದಿದ್ದಾರೆ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, 2001 ರಲ್ಲಿ ನನ್ನ ಮಡದಿ ಹೆಸರಿನಲ್ಲಿ ನಿವೇಶನಕ್ಕೆ ಅರ್ಜಿ ಹಾಕಿದ್ದವು. ಆದರೆ, 2022 ರಲ್ಲಿ ಒಂದು ನಿವೇಶನ ಮಂಜೂರಾತಿ ಆಗಿದೆ. ಅಲ್ಲಿ ವರುಣ ನಾಲೆ ಹಾದುಹೋಗಿದೆ. ಅಲ್ಲಿಯ ನಿವೇಶನ ಹಳ್ಳಬಿದ್ದು ಸರಿ ಇಲ್ಲದ ಕಾರಣ ಅದರ ಬದಲು ಅಲ್ಲೇ ಅದೇ ಬಡಾವಣೆಯಲ್ಲಿ ಬೇರೆಡೆ 12×18 ಮೀಟರ್ ಬದಲಿ ನಿವೇಶನ ಕೊಟ್ಟಿದ್ದಾರೆ. ಅಲ್ಲೇ ಕೊಟ್ಟಿದ್ದಾರೆ ಹೊರತು ನನಗೆ ಬೇರೆ ಬಡಾವಣೆಯಲ್ಲಿ ಕೊಟ್ಟಿಲ್ಲ. ಇದರ ಬಗ್ಗೆ ಮುಡಾ ಸಭೆಯಲ್ಲಿ ಅನುಮೋದನೆ ಆಗಿದೆ ಎಂದು ಸಾಕ್ಷ್ಯಧಾರ ಮುಂದಿಟ್ಟು ಸ್ಪಷ್ಟನೆ ಕೊಟ್ಟರು.

ಮುಡಾ ಅಧ್ಯಕ್ಷ ಮರಿಗೌಡ ಅವನೊಬ್ಬ ದೊಡ್ಡ ಮೂಡ. ಅವನು ನನ್ನ ನೈತಿಕತೆ ಬಗ್ಗೆ ಏನು ಮಾತಾಡೋದು. ಅದಕ್ಕೆ ಈ ಪ್ರಕರಣವನ್ನ ಸಿಬಿಐಗೆ ವಹಿಸಬೇಕು. ಇಲ್ಲ ಅಂದರೆ ಪ್ರಕರಣವನ್ನ ಹಳ್ಳ ಹಿಡಿಸಿಬಿಡ್ತಾರೆ. ದಲಿತರ ಭೂಮಿ ಖರೀದಿ ಮಾಡಿ ಮೋಸ ಮಾಡ್ತಾ ಇದ್ದೀರಾ. ನೀವು ಒಬ್ಬ ಸಮಾಜವಾದಿ ಆದರೆ, ಆ ನಿವೇಶನ ಅವರಿಗೆ ವಾಪಸ್ ಮಾಡಿ. ಇದೊಂದು ದೊಡ್ಡ ಸ್ಕ್ಯಾಂಡಲ್. ಈ ಕರ್ಮಕಾಂಡ ಸುಮಾರು10 ಸಾವಿರ ಕೋಟಿ ಅಕ್ರಮ ನಡೆದಿದೆ. ಪೋಲಿಸರು ಇದನ್ನ ತನಿಖೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಸಿಬಿಐ ಗೆ ವಹಿಸಬೇಕು ಎಂದು ಆಗ್ರಹಿಸುತ್ತೇನೆ ಎಂದು ಹೆಚ್.ವಿಶ್ವನಾಥ್ ತಿಳಿಸಿದರು.

ಹೇಯ್… ಮೂಡಾ ಮರಿಗೌಡ ನನ್ನ ಮೊರ್ಯಾಲಿಟಿ ಬಗ್ಗೆ ಪ್ರಶ್ನೆ ಮಾಡ್ತಿಯಾ ಬಾ ದಾಖಲೆ ತಗೊಂಡು. ಮೈಸೂರು ನಗರದ ಘನತೆ ಗೌರವವನ್ನ ಸಿಎಂ ಸೇರಿದಂತೆ ಇವರೆಲ್ಲ ಸೇರಿ ಹಾಳು ಮಾಡ್ತಿದ್ದಾರೆ. ಇದು ಬಹಳ ನೋವಿನ ಸಂಗತಿ. ಬರಿ ಅಹಿಂದ ನಾಯಕ ಅಂತ ಬೊಗಳೆ ಹೊಡೆಯುವ ಬದಲು ನಿಮಗೆ ಮಾನವೀಯತೆ ಇದ್ದರೆ ಆ ಜಾಗವನ್ನು ವಾಪಸ್ ಮಾಡಿ. ಇಲ್ಲ ಅಂದರೆ ಅದೇ ಜಾಗದಲ್ಲಿ ಒಂದು ಆಸ್ಪತ್ರೆ ಕಟ್ಟಿಸಿ ಬಡ ಜನರಿಗೆ ಸಹಾಯವಾದರೂ ಆಗುತ್ತೆ ಎಂದು  ಸಿಎಂ ಸಿದ್ದರಾಮಯ್ಯ ಮತ್ತು ಸಿಎಂ ಬೆಂಬಲಿಗರ ವಿರುದ್ದ ಹೆಚ್.ವಿಶ್ವನಾಥ್ ಕಿಡಿಕಾರಿದರು.

ವಿಶ್ವನಾಥ್ ರಾಜಕೀಯ ದಿವಾಳಿ ಹೇಳಿಕೆಗೆ ತಿರುಗೇಟು

ವಿಶ್ವನಾಥ್ ರಾಜಕೀಯ ದಿವಾಳಿ ಎಂಬ ಹರೀಶ್ ಗೌಡ, ಮರಿಗೌಡ ಹೇಳಿಕೆಗೆ ತಿರುಗೇಟು ನೀಡಿದ ಹೆಚ್.ವಿಶ್ವನಾಥ್, ನಾನು ರಾಜಕೀಯ ದಿವಾಳಿ ಆಗಿಲ್ಲ. ದಿವಾಳಿ ಆಗಿರೋದು ನೀವು. ನೀವೆಲ್ಲಾ ಸೇರಿ ಸಿದ್ದರಾಮಯ್ಯ ಅವರನ್ನು ದಿವಾಳಿ ಮಾಡುತ್ತಿದ್ದೀರಾ. ನಾನು ಈಗಲೂ ಹೇಳುತ್ತೇನೆ. ಪ್ರಾಮಾಣಿಕವಾಗಿ ನಾನು ಬದುಕುತ್ತಿದ್ದೇನೆ. ನಿಮ್ಮ ಹಾಗೆ ಬದುಕುತ್ತಿಲ್ಲ  ಎಂದು ವಾಗ್ದಾಳಿ ನಡೆಸಿದರು.

ಎಂಎಲ್ಸಿ ಮಂಜೇಗೌಡ ವಿರುದ್ದ ಆಕ್ಷನ್ ತಗೋ ನೋಡೋಣ

ಎಂಎಲ್ಸಿ ಮಂಜೇಗೌಡ ಇದು ಸಾಬೀತಾದ್ರೆ ರಾಜಿನಾಮೆ ನೀಡುತ್ತೇನೆ ಎನ್ನುತ್ತಾನೆ. ಈತ ಸಿಎ ಸೈಟ್ ಗಳನ್ನೇ ಸೈಟ್ ಮಾಡಿ ಮಾರಿ ಬಿಟ್ಟಿದ್ದಾನೆ. ಸತ್ಯವಂತ ಮರೀಗೌಡ ಇದರ ಬಗ್ಗೆ ಆಕ್ಷನ್‌ ತಗೊ ನೋಡೋಣ. ಪಾರ್ಕಿಗೆ ಬಿಟ್ಟ ನಿವೇಶನಗಳನ್ನೇ ಮಾರಿಬಿಟ್ಟಿದ್ದಾನೆ. ಇವನ ಮೇಲೆ ಆ್ಯಕ್ಷನ್ ತಗೆದುಕೊ ಎಂದು ಮರಿಗೌಡ ಏಕವಚನದಲ್ಲೇ ಹೆಚ್.ವಿಶ್ವನಾಥ್ ಸವಾಲು ಹಾಕಿದರು.

Key words: Muda scam, CBI, H. Vishwanath, mysore