ಮುಡಾ ಹಗರಣ: ಸಿಎಂ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ತರಲು ಯತ್ನ- ದಾಖಲೆ ಸಮೇತ ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು,ಜುಲೈ,26,2024 (www.justkannada.in):  ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ಮುಂದಾಗಿರುವ ಬಿಜೆಪಿ, ಜೆಡಿಎಸ್ ಗೆ ಸಿಎಂ ಸಿದ್ದರಾಮಯ್ಯ ದಾಖಲೆ ಮೂಲಕ ತಿರುಗೇಟು ನೀಡಿದ್ದಾರೆ.

ಸುದ್ದಿಗೋಷ್ಠಿ  ನಡೆಸಿ ಮುಡಾ ಹಗರಣ ಕುರಿತು ದಾಖಲೆ ಮೂಲಕ  ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ  ರಾಜಕೀಯ ದುರುದ್ದೇಶದಿಂದ ನಿಲುವಳಿ ಸೂಚನೆ ನೀಡಿದ್ದರು. ಕಾನೂನು ಬಾಹಿರ ರೀತಿಯಲ್ಲಿ ಚರ್ಚೆಗೆ ನಿಲುವಳಿ ತಂದಿದ್ದರು.  ಆದರೆ ನಿಯಮ ವಿರುದ್ದ ಇದ್ದುದ್ದರಿಂದಲೇ ಚರ್ಚೆಗೆ ಅವಕಾಶ ನೀಡಲಿಲ್ಲ. ನಿಯಮಗಳ ಪ್ರಕಾರ ಈ ಬಗ್ಗೆ ಚರ್ಚೆ ಮಾಡಲು ಆಗಲ್ಲ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದಿರೋದು ಇವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ರಾಜ್ಯದ ಪ್ರವಾಹದ ಬಗ್ಗೆ ಯಾವುದೇ ಚರ್ಚೆ ಮಾಡಲಿಲ್ಲ. ಇವರು ಸಿಎಂ ವ್ಯಕ್ತಿತ್ವಕ್ಕೆ ಕಪ್ಪುಚುಕ್ಕೆ ತರಲು ಯತ್ನಿಸಿದರು. ಸರ್ಕಾರಕ್ಕೆ ಮಸಿ ಬಳಿಯಲು ಯತ್ನಿಸಿದರು. ನಾನು ಮಂತ್ರಿಯಾಗೇ 40 ವರ್ಷ ಆಯ್ತು ಈವರೆಗೆ ನನ್ನ ಜೀವನದಲ್ಲಿ ಒಂದು ಕಪ್ಪುಚುಕ್ಕೆ ಇಲ್ಲ. ಇವತ್ತಿನವರೆಗೂ ನನ್ನ ರಾಜಕೀಯ ಜೀವನ ತೆರೆದ ಪುಸ್ತಕ ಬಿಜೆಪಿ ಜೆಡಿಎಸ್ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಜನರ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಗುಡುಗಿದರು.

ಬಿಜೆಪಿಯವರು ವಿರೋಧಪಕ್ಷವಾಗಿ ಕೆಲಸ ಮಾಡುತ್ತಿಲ್ಲ. ದ್ವೇಷದ ರಾಜಕಾರಣಕ್ಕಾಗಿ ವಿಧಾನಸೌಧ ಬಳಸಿಕೊಳ್ಳುತ್ತಿದ್ದಾರೆ. ಲೋಕಸಭೆಯಲ್ಲಿ ಮೈತ್ರಿಯಾದರು ಹೆಚ್ಚು ಸ್ಥಾನ ಗೆಲ್ಲಲು ಆಗಲಿಲ್ಲ. ವಾಮಮಾರ್ಗದಲ್ಲಿ ಬಿಜೆಪಿ ಜನರು ವಿಶ್ವಾಸ ಗಳಿಸಲು ಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಯಾವುದೇ ಆಧಾರಗಳಿಲ್ಲದೇ ಇವರುಗಳು ಆರೋಪ ಮಾಡುತ್ತಿದ್ದಾರೆ ಸಿಎಂಗೆ ಕಪ್ಪು ಚುಕ್ಕೆ ತರುವುದಕ್ಕೆ ಇವರೆಲ್ಲ ಪಿತೂರಿ ನಡೆಸುತ್ತಿದ್ದಾರೆ. ಬಿಜೆಪಿಯವರು ಸುಳ್ಳಿನ ಸರದಾರರು ಎಂದು ಕಿಡಿಕಾರಿದರು.

ಇನ್ನೂ ತಮ್ಮ ವಿರುದ್ದ ಕೇಳಿ ಬಂದಿರುವ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ, ಪಿಟಿಸಿಎಲ್ ಕಾಯ್ದೆ ಅನ್ವಯ ಜಮೀನು ಇಲ್ಲ, ಇದು ಪಿತ್ರಾರ್ಜಿತ ಆಸ್ತಿಯಾಗಿದ್ದು, ಈ ಜಮೀನ ಮಾಲೀಕ ನಿಂಗ ಬಿನ್‌ ಜವರ ಮೈಸೂರು ತಾಲೂಕು ಕಚೇರಿಗೆ ಒಂದು ಅರ್ಜಿಯನ್ನು ನೀಡಿದ್ದರು. ಅದರ ಅನ್ವಯ ಹರಾಜು ನಡೆಯುತ್ತದೆ. ಆಗ ಹರಾಜಿನ ಮೊತ್ತು ಮೂರು ರೂ. ಆಗಿರುತ್ತದೆ. ಹರಾಜಿನಲ್ಲಿ ಒಂದು ರೂ.ಗೆ ನಿಂಗ ಬಿನ್‌ ಜವರ 03-10-1935 ರಂದು ಪಡೆದುಕೊಂಡಿರುತ್ತಾರೆ. ಇದು ಹರಾಜಿನಲ್ಲಿ ಬಂದಿರುವ ಆಸ್ತಿಯಾಗಿದ್ದು, ಇದು ಪಿತ್ರಾರ್ಜಿತ ಆಸ್ತಿಯಾಗಿದೆ. ಇದು ಪಿಟಿಸಿಎಲ್‌ ಕಾಯ್ದೆಗೆ ಒಳಪಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Key words: Muda scandal, BJP,CM Siddaramaiah