ಮೈ ಲಾರ್ಡ್, ನಮ್ಮ ದೇಶವನ್ನು ರಕ್ಷಿಸಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಬೆಂಗಳೂರು, ಆಗಸ್ಟ್ 13, 2023 (www.justkannada.in): ಕೇಂದ್ರದ ಆಡಳಿತಾರೂಢ ಬಿಜೆಪಿಯು ಅರಾಜಕತೆಗೆ ಶರಣಾಗಿದೆ ಎಂದು  ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯ ಚುನಾವಣಾಧಿಕಾರಿ ಹಾಗೂ ಚುನಾವಣಾ ಆಯುಕ್ತರನ್ನು ನೇಮಿಸುವ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿ ಅವರನ್ನು ಹೊರಗಿಡುವ ಕೇಂದ್ರ ಸರಕಾರದ ಪ್ರಸ್ತಾವಿತ ಕಾನೂನನ್ನು ಮಮತಾ ಬ್ಯಾನರ್ಜಿ ತೀವ್ರವಾಗಿ ಖಂಡಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತರನ್ನು ನೇಮಿಸುವ ತ್ರಿಸದಸ್ಯ ಸಮಿತಿಯಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಯವರ ಪಾತ್ರ ಮಹತ್ವದ್ದಾಗಿದೆ. ಅವರನ್ನು ಹೊರಗಿಡುವ ಪ್ರಸ್ತಾವಿತ ಕಾನೂನುಗೆ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಸಮಿತಿಯಲ್ಲಿ ಸಿಜೆಐ ಇದ್ದಲ್ಲಿ ಚುನಾವಣೆಯಲ್ಲಿ ಆಕ್ರಮವೆಸಗುವುದಕ್ಕೆ ಅಡ್ಡಿಯಾಗಬಹುದೆಂಬ ಭೀತಿಯಿಂದ ಬಿಜೆಪಿ ಈ ಯೋಜನೆಯನ್ನು ರೂಪಿಸಿದೆ ಎಂದು ಮಮತಾ ದೂರಿದ್ದಾರೆ.

ಮೈ ಲಾರ್ಡ್, ನಮ್ಮ ದೇಶವನ್ನು ರಕ್ಷಿಸಿ ಎಂದು ನಾವು ಭಾರತದ ನ್ಯಾಯಾಂಗದಲ್ಲಿ ಪ್ರಾರ್ಥಿಸುತ್ತೇವೆ ಎಂದು ಬ್ಯಾನರ್ಜಿ ಸೋಷಿಯಲ್ ಮೀಡಿಯಾದಲ್ಲಿಹೇಳಿದ್ದಾರೆ.