ಖತರ್ನಾಕ್ ಬೈಕ್ ಕಳ್ಳನ ಬಂಧನ: 19 ಬೈಕ್ ಗಳು ವಶ.

ಮೈಸೂರು,ಜೂನ್,12,2024 (www.justkannada.in):  ಮೈಸೂರು ಜಿಲ್ಲೆಯ ನಂಜನಗೂಡು ಠಾಣಾ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಖತರ್ನಾಕ್ ಬೈಕ್ ಕಳ್ಳನನ್ನು ಬಂಧಿಸಿ 19 ಬೈಕ್ ಗಳನ್ನ ವಶಕ್ಕೆ ಪಡೆದಿದ್ದಾರೆ.

ಚಾಮರಾಜನಗರ ಮೂಲದ ಕರಿನಂಜನಪುರ ಗ್ರಾಮದ ನಿವಾಸಿ 56 ವರ್ಷದ ಶಂಕರಪ್ಪ ಬಂಧಿತ ಆರೋಪಿ. ಬಂಧಿತನಿಂದ ಸುಮಾರು 15 ಲಕ್ಷ ರೂ. ಬೆಲೆ ಬಾಳುವ ಬೈಕ್‌ ಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಂಜನಗೂಡು ಪಟ್ಟಣದಲ್ಲಿ ಬೈಕ್ ಕಳವು ಪ್ರಕರಣ ಹೆಚ್ಚಾದ ಹಿನ್ನೆಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಡಿವೈಎಸ್ಪಿ ರಘು ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು. ನಂಜನಗೂಡಿನ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದ ಬಳಿ ಪೊಲೀಸರು ಗಸ್ತಿಗೆ ತೆರಳಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಬೈಕ್ ಗಳನ್ನು ನೋಡುತ್ತಿದ್ದನ್ನು ಕಂಡ ನಂಜನಗೂಡು ಪೊಲೀಸರು ಅನುಮಾನಗೊಂಡು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬೈಕ್ ಕಳ್ಳತನದ ಬಗ್ಗೆ ಬಾಯಿಬಿಟ್ಟಿದ್ದಾನೆ.

ಚಾಮರಾಜನಗರ ಪಟ್ಟಣ ಮತ್ತು ಗಡಿಭಾಗದ ಹಳ್ಳಿಗಳಲ್ಲಿ ಸುಮಾರು 19 ಬೈಕ್ ಗಳನ್ನು ಕಳವು ಮಾಡಿದ್ದೇನೆ ಎಂದು ಆರೋಪಿ ಶಂಕರಪ್ಪ ಒಪ್ಪಿಕೊಂಡಿದ್ದಾನೆ. ಈ ವೇಳೆ ಪೊಲೀಸರು ಆರೋಪಿಯನ್ನ ಬಂಧಿಸಿ, ಬೈ ಕ್‌ಗಳನ್ನ ವಶಕ್ಕೆ ಪಡೆದಿದ್ದಾರೆ. ಈ ಕುರಿತು ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore, bike, thief, arrested