ಮೈಸೂರು ಚಲೋ: ಜಾಹೀರಾತಿನಿಂದ ಹೆಚ್.ಡಿ ರೇವಣ್ಣ ಕಿಕ್ ಔಟ್

ಮೈಸೂರು,ಆಗಸ್ಟ್,10,2024 (www.justkannada.in): ಮುಡಾ ಹಗರಣ ವಿರೋಧಿಸಿ  ಬೆಂಗಳೂರಿನಿಂದ ಮೈಸೂರಿನವರೆಗೆ ಬಿಜೆಪಿ, ಜೆಡಿಎಸ್ ದೋಸ್ತಿ ಪಕ್ಷಗಳು ನಡೆಸಿದ ಮೈಸೂರು ಚಲೋ ಪಾದಯಾತ್ರೆಗೆ ಇಂದು ತೆರೆ ಬೀಳಲಿದ್ದು, ಮೈಸೂರಿನಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಆದರೆ ಈ ಸಮಾವೇಶಕ್ಕೆ ಹಾಕಲಾಗಿರುವ ಜಾಹೀರಾತಿನಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಮತ್ತು ಮಕ್ಕಳಾದ ಪ್ರಜ್ವಲ್ ರೇವಣ್ಣ ಮತ್ತು ಸೂರಜ್ ರೇವಣ್ಣರನ್ನು ಕಿಕ್ ಔಟ್ ಮಾಡಲಾಗಿದೆ.

ಹೌದು,  ಕಳೆದ ಕೆಲ ದಿನಗಳಿಂದ ಮಾಜಿ ಸಚಿವ ಹೆಚ್.ಡಿ ರೇವಣ್ಣ ಮತ್ತು ಮಕ್ಕಳಾದ ‍ಪ್ರಜ್ವಲ್ ರೇವಣ್ಣ ಮತ್ತು ಸೂರಜ್ ರೇವಣ್ಣ  ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದ್ದು, ಪ್ರಕರಣ ಸಂಬಂಧ ಎಸ್ ಐಟಿ ತನಿಖೆ ನಡೆಯುತ್ತಿದೆ. ಈ ನಡುವೆ ಪ್ರಜ್ವಲ್ ರೇವಣ್ಣ ನ್ಯಾಯಾಂಗ ಬಂಧನದಲ್ಲಿದ್ದರೇ, ಮಾಜಿ ಸಚಿವ ಹೆಚ್.ಡಿ ರೇವಣ್ಣ, ಸೂರಜ್ ರೇವಣ್ಣ ಜೈಲು ಸೇರಿ ನಂತರ  ಜಾಮೀನಿನ ಮೇಲೆ ಹೊರ ಬಂದಿದ್ದಾರೆ.

ಸಂತ್ರಸ್ತ ಮಹಿಳೆಯ ಕಿಡ್ನಾಪ್ ಆರೋಪ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸಿದ್ದ ಭವಾನಿ ರೇವಣ್ಣ  ಸಹ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಸೂರಜ್ ರೇವಣ್ಣ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣವಿದೆ.

ಈ ನಡುವೆಯೇ ಮೈಸೂರು ಚಲೋ ಪಾದಯಾತ್ರೆಯಲ್ಲಿ ಹೆಚ್,ಡಿ ರೇವಣ್ಣ ಕಾಣಿಸಿಕೊಂಡಿಲ್ಲ. ಅಲ್ಲದೆ ಇಂದು ಮೈಸೂರಿನಲ್ಲಿ ನಡೆಯುತ್ತಿರುವ ಸಮಾವೇಶದ ಜಾಹೀರಾತಿನಲ್ಲೂ ಹೆಚ್.ಡಿ ರೇವಣ್ಣ ಮತ್ತು ಕುಟುಂಬಕ್ಕೆ ಕೋಕ್ ನೀಡಲಾಗಿದೆ.

ಇದನ್ನ ಗಮನಿಸಿದರೆ ರೇವಣ್ಣ ಕುಟುಂಬದಿಂದ ಸಮಾವೇಶ ಸಂಘಟಕರು ಅಂತರ ಕಾಯ್ದು ಕೊಂಡಿರುವುದು ಸ್ಪಷ್ಟವಾಗುತ್ತದೆ. ಪತ್ರಿಕೆಗಳಲ್ಲಿ ನೀಡಿರುವ ಜಾಹೀರಾತುಗಳಲ್ಲಾಗಲಿ ಮೈಸೂರಿನ ನಗರದ ತುಂಬಾ ರಾರಾಜೀಸುತ್ತಿರುವ ಫ್ಲೆಕ್ಸ್ ಗಳಲ್ಲಾಗಲಿ ಹೆಚ್.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಅವರ ಭಾವಚಿತ್ರ ಎಲ್ಲೂ ಕಂಡು ಬರದಿರುವುದು ಇದಕ್ಕೆ ಪುಷ್ಠಿ ನೀಡುವಂತಿದೆ.

ಜಾಹೀರಾತಿನಲ್ಲಿ ಸ್ಥಳೀಯ ಮುಖಂಡರಾದ ಜಿ.ಟಿ ದೇವೇಗೌಡ, ಸಾ.ರಾ ಮಹೇಶ್, ಮಾಜಿ ಮೇಯರ್ ಚಿನ್ನಿ ರವಿ ಇವರೆಲ್ಲಾ ಫೋಟೊಗಳಿವೆ.  ಆದರೆ ಮಾಜಿ ಸಚಿವ ಹಾಗೂ ಪ್ರಮುಖ ನಾಯಕರಾಗಿರುವ ಹೆಚ್.ಡಿ ರೇವಣ್ಣ ಅವರ ಭಾವಚಿತ್ರ ಕಂಡು ಬಂದಿಲ್ಲ.  ಈ ಎಲ್ಲಾ ಬೆಳವಣಿಗೆಗಳನ್ನ ನೋಡಿದರೇ ಹಗರಣ ಹಿನ್ನೆಲೆಯಲ್ಲಿ ಪಕ್ಷಕ್ಕೆ ಡ್ಯಾಮೇಜ್ ಆಗುವ ಸಾಧ್ಯತೆ  ಇರುವುದರಿಂದ  ಹೆಚ್.ಡಿ ರೇವಣ್ಣ ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ.

ಇನ್ನು ಹೆಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ  ಪಾದಯಾತ್ರೆಯುದ್ದಕ್ಕೂ ಪ್ರಮುಖ ಆಕರ್ಷಣೆಯಾಗಿದ್ದರು.

Key words: Mysore Chalo, HD Revanna, kicks out, advertisement