ಈ ಬಂಡೆ ಸಿಎಂ ಸಿದ್ದರಾಮಯ್ಯ ಕಾವಲಿಗೆ ಸದಾ ಇರುತ್ತೆ: ನಿಮಗೆ ಏನೂ ಮಾಡೋಕೆ ಆಗೋದಿಲ್ಲ- ಡಿಕೆ ಶಿವಕುಮಾರ್ ಗುಡುಗು

ಮೈಸೂರು,ಆಗಸ್ಟ್,9,2024 (www.justkannada.in):  ಹೇ ಅಶೋಕ, ಹೇ  ಕುಮಾರಸ್ವಾಮಿ ನಿಮಗೆ ಸಿಎಂ ಸಿದ್ದರಾಮಯ್ಯರ ರಾಜೀನಾಮೆ ಬೇಕಾ? ಈ ಬಂಡೆ ಸಿದ್ದರಾಮಯ್ಯ ಜೊತೆ ಇದೆ. ಸಿಎಂ ಸಿದ್ದರಾಮಯ್ಯ ಕಾವಲಿಗೆ ಸದಾ ಇರುತ್ತೆ. ಈ ಜನ್ಮದಲ್ಲಿ  ನಿಮಗೆ ಏನೂ ಮಾಡೋಕೆ ಆಗೋದಿಲ್ಲ. ಹೀಗೆ ಜೆಡಿಎಸ್. ಬಿಜೆಪಿ ನಾಯಕರ ವಿರುದ್ದ ಗುಡುಗಿದ್ದು ಡಿಸಿಎಂ ಡಿಕೆ ಶಿವಕುಮಾರ್.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಭಾಷಣ ಮಾಡಿ ದೋಸ್ತಿ ಪಕ್ಷಗಳ ಪಾದಯಾತ್ರೆ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ ಡಿಸಿಎಂ ಡಿಕೆ ಶಿವಕುಮಾರ್, ಅಂದು ಬ್ರಿಟಿಷರ ವಿರುದ್ಧ ನಾವು ಹೋರಾಟ ಮಾಡಿದ್ದವು. ಇದೇ  9 ನೇ ತಾರೀಕು ಬಳ್ಳಾರಿ ಪಾದಯಾತ್ರೆ ಮಾಡಿದ್ವಿ. ಕ್ವಿಟ್ ಇಂಡಿಯಾ ಮೂಮೆಂಟ್ ದಿನ ಬಳ್ಳಾರಿಯಲ್ಲಿ ಗಣಿ, ಕಳ್ಳರ ವಿರುದ್ಧ ಸಮಾವೇಶ ಮಾಡಿದ್ದವು. ಇಂದು ಬಿಜೆಪಿ ಎನ್ ಡಿ ಎ ವಿರುದ್ಧ, ಬಡವರಿಗಾಗಿ, ಐದು ಗ್ಯಾರಂಟಿ ಉಳಿವಿಗಾಗಿ,  ಹಾಗೂ ನಮ್ಮ ವಿರುದ್ದ  ಮಾಡುತ್ತಿರುವ ಹೋರಾಟ‌ ನಿಲ್ಲಿಸೋಕೆ ಇಂದು ಹೋರಾಟ. ಜೆಡಿಎಸ್, ಬಿಜೆಪಿ ಪಾದಯಾತ್ರೆ, ಪಾದಯಾತ್ರೆ ಅಲ್ಲ, ಇದೊಂದು ಪಾಪ ವಿಮೋಚನಾ ಯಾತ್ರೆಯನ್ನ ಮಾಡ್ತಾ ಇದ್ದಾರೆ. ನಮ್ಮದು ಅಧರ್ಮಿಗಳ, ಅನ್ಯಾಯದ ವಿರುದ್ಧ ನ್ಯಾಯದ ಯುದ್ಧ, ಅಸತ್ಯದ ವಿರುದ್ಧ ನ್ಯಾಯ ಯುದ್ಧ ಮಾಡುತ್ತಿದ್ದೇವೆ ಎಂದರು.

ಸಿದ್ದರಾಮಯ್ಯ ನಾಯಕತ್ವ, ಡಿಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಬಂದಿರುವ ಸರ್ಕಾರವನ್ನ ತೆಗೆಯಲು ಹುನ್ನಾರ ನಡೆಯುತ್ತಿದೆ. ಬಡವರಿಗೆ ಗ್ಯಾರಂಟಿ ಕೊಟ್ಟು, ಬಡವರ ರಕ್ಷಣೆಗಾಗಿ ನಾವು ಹೋರಾಟ ಮಾಡ್ತಿದ್ದೇವೆ. ಮಿಸ್ಟರ್ ಕುಮಾರಸ್ವಾಮಿ, ಮಿಸ್ಟರ್ ಅಶೋಕ, ಮಿಸ್ಟರ್ ವಿಜಯೇಂದ್ರ ಹೀಗೆ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದ್ರಿ. ಕುಮಾರಸ್ವಾಮಿ ನೀನು ಗೆದ್ದಿರೋದು 19 ಸೀಟು ಅಷ್ಟೇ. ನಿನಗೆ ಸಿದ್ದರಾಮಯ್ಯ ರಾಜೀನಾಮೆ ಬೇಕಾ. ಈ ಬಂಡೆ ಸಿದ್ದರಾಮಯ್ಯ ಜೊತೆ ಇದೆ. ಈ ಬಂಡೆ ಜೊತೆ 136 ಶಾಸಕರು ಇದ್ದಾರೆ. 1.80 ಕೋಟಿ ಮತದಾರರು ಸಿಎಂ ಸಿದ್ದರಾಮಯ್ಯ ಪರ ಇದ್ದಾರೆ. ನಿಮಗೆ ಏನೂ ಮಾಡೋಕೆ ಆಗೋದಿಲ್ಲ ಎಂದು ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.

ನಿಮಗೆ ಇತಿಹಾಸ ಗೊತ್ತಿದ್ಯ, ಈ ನಿಮ್ಮ ಪಾಪ ವಿಮೋಚನೆ ಯಾತ್ರೆ ಮಾಡಿ, ಶಕ್ತಿ ತುಂಬೋ ಕೆಲಸ ಮಾಡಿದ್ದಾರೆ ಅವರಿಗೆ ನಾನು ಧನ್ಯವಾದ ಹೇಳ್ತೀನಿ. ಕಾವೇರಿಗಾಗಿ ಎಸ್. ಎಂ ಕೃಷ್ಣ ಪಾದಯಾತ್ರೆ ಮಾಡಿದ್ರು, ಸ್ವಾತಂತ್ರ್ಯಕ್ಕಾಗಿ ದಂಡಿಯಾತ್ರೆ ಆಗಿತ್ತು. ಬೆಲೆ ಏರಿಕೆ ವಿರುದ್ಧ ರಾಹುಲ್ ಗಾಂಧಿ ಪಾದಯಾತ್ರೆ ಮಾಡಿದರು. ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ನಾವು ಪಾದಯಾತ್ರೆ ಮಾಡಿದವು. ಕಾವೇರಿಗಾಗಿ ಮೇಕೆದಾಟು ಯಾತ್ರೆ ಮಾಡಿದವು. ಈ ನಾಡಿನ ನೀರು, ರೈತರಿಗಾಗಿ ಹೋರಾಟ ಮಾಡಿದವು. ನಿಮ್ಮ ಯಾತ್ರೆ ಯಾವುದಕ್ಕೆ? ಎಂದು ಡಿಕೆ ಶಿವಕುಮಾರ್ ಟೀಕಿಸಿದರು.

Key words: mysore, Janandolana, congress, DCM, DK Shivakumar