ರಾಷ್ಟ್ರೀಯ ಲೋಕ ಅದಾಲತ್: ದೂರಾಗಿದ್ದ ದಂಪತಿ ಒಂದು ಮಾಡಿ ಆಶೀರ್ವಾದಿಸಿದ ನ್ಯಾಯಾಧೀಶರು

ಮೈಸೂರು,ಸೆಪ್ಟಂಬರ್,14,2024 (www.justkannada.in): ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿಂದು  ರಾಷ್ಟ್ರೀಯ ಲೋಕ ಅದಾಲತ್ ನಡೆಯುತ್ತಿದ್ದು 30 ಕ್ಕೂ ಹೆಚ್ಚು ಪ್ರಕರಣಗಳ ಇತ್ಯರ್ಥಪಡಿಸಿ ದೂರಾಗಿದ್ದ ದಂಪತಿಗಳನ್ನ ನ್ಯಾಯಾಧೀಶರು ಒಂದು ಮಾಡಿ ಶುಭ ಹಾರೈಸಿದರು.

ಮೈಸೂರು ಜಿಲ್ಲಾ ಸತ್ರ ನ್ಯಾಯಾಧೀಶ ರವೀಂದ್ರ ಹೆಗಡೆ ನೇತೃತ್ವದಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಲೋಕ ಅದಾಲತ್ ನಡೆಯುತ್ತಿದ್ದು ನ್ಯಾಯಾಧೀಶರು ವಿವಿಧ ವ್ಯಾಜ್ಯಗಳನ್ನು ಇತ್ಯರ್ಥ ಮಾಡಿದ್ದಾರೆ.

ಕೌಟುಂಬಿಕ ಕಲಹದಿಂದ ಹಲವು ವರ್ಷಗಳಿಂದ ದೂರಾಗಿದ್ದ ದೊಡ್ಡ ಕಾನ್ಯದ ಪ್ರಸಾದ್ ಮತ್ತು ವೀರದೇವನಪುರ ಪಲ್ಲವಿ ಈ ದಂಪತಿಯನ್ನ ಲೋಕ ಅದಾಲತ್ ನಲ್ಲಿ ನ್ಯಾಯಾಧೀಶರು ಒಂದು ಮಾಡಿದ್ದು, ಈ ವೇಳೆ ದಂಪತಿಗಳು ಸಂತಸ ಹಂಚಿಕೊಂಡಿದ್ದಾರೆ.

ಕಳೆದ ಮೂರುವರೆ ವರ್ಷಗಳಿಂದ ಕೌಟುಂಬಿಕ ಕಲಹದಿಂದ ದೂರಾಗಿದ್ದ ಈ ದಂಪತಿ ಒಂದಾಗಿ ಬಾಳಿ ಎಂದು ನ್ಯಾಯಾಧೀಶರು ಆಶೀರ್ವಾದ ಮಾಡಿ ಕಳುಹಿಸಿದರು.

ಈ ಕುರಿತು ಮಾತನಾಡಿರುವ ಮುಖ್ಯ ನ್ಯಾಯಾಧೀಶರಾದ ಭಾಸ್ಕರ್ ರಾವ,  ಇಂದು ಕೌಟುಂಬಿಕ ನ್ಯಾಯಾಲಯದಲ್ಲಿ 30 ಕ್ಕೂ ಹೆಚ್ಚು ಪ್ರಕರಣಗಳ ಇತ್ಯರ್ಥವಾಗಿದೆ. 14 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಲೋಕದಲತ್ ಗೆ ಬಂದಿದ್ದು ಈಗ ಶೇ 20 ರಷ್ಟು ಪ್ರಕರಣಗಳು ಇತ್ಯರ್ಥವಾಗಿವೆ. ಇನ್ನೂ ಹಲವು ಪ್ರಕರಣಗಳು ರಾಜಿ  ಸಂದಾನ ನಡೆಯುತ್ತಿವೆ. ಕೆಲವು ಕಠಿಣ ಪ್ರಕರಣಗಳ ಹೊರತು ಪಡಿಸಿ ರಾಜಿಯಾಗಬಹುದಾದ ಪ್ರಕರಣಗಳ ಇತ್ಯರ್ಥ ಮಾಡುತ್ತಿದ್ದೇವೆ. ಮೈಸೂರು ಜಿಲ್ಲೆಯ ಯಾವುದಾದರೂ ಗ್ರಾಮವನ್ನು ವ್ಯಾಜ್ಯ ಮುಕ್ತ ಗ್ರಾಮವನ್ನಾಗಿಸಲು ಮುಂದಾಗಿದ್ದೇವೆ. ಪಿರಿಯಾಪಟ್ಟಣದ ತಾಲೂಕಿನ ಒಂದು ಗ್ರಾಮದಲ್ಲಿ ಒಂದೇ ಒಂದು ವ್ಯಾಜ್ಯ ಪ್ರಕರಣ ಇದ್ದು ಅದೂ ಕೂಡ ಇತ್ಯರ್ಥವಾಗಿದೆ. ಆ ಗ್ರಾಮವನ್ನು  ವ್ಯಾಜ್ಯ ಮುಕ್ತ ಗ್ರಾಮಾವೆಂದು ಘೋಷಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ರಾಮಗಳನ್ನು ವ್ಯಾಜ್ಯ ಮುಕ್ತ ಗ್ರಾಮಗಳನ್ನಾಗಿ ಮಾಡಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.

Key words: mysore,  Lok Adalat,  Judge, blessed, couple