ನೀರು ಸಂಸ್ಕರಣಾ ಘಟಕಕ್ಕೆ ಅಧಿಕಾರಿಗಳ ಭೇಟಿ, ಪರಿಶೀಲನೆ.

ಮೈಸೂರು, ಜೂನ್,1,2024 (www.justkannada.in):  ಮೈಸೂರು ನಗರದ ಕೃಷ್ಣರಾಜ,ಚಾಮುಂಡೇಶ್ವರಿ ಭಾಗದ ಪ್ರದೇಶಗಳಿಗೆ ಕಬಿನಿ ನದಿಯಿಂದ ನೀರು ಪೂರೈಸುವ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಮಾರ್ಗದಲ್ಲಿರುವ ಬಿದರಗೂಡು ನೀರು ಸಂಸ್ಕರಣಾ ಘಟಕಕ್ಕೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಕಳೆದ ಹದಿನೈದು ದಿನಗಳಲ್ಲಿ ಕೆಲವು ಗ್ರಾಮಗಳಲ್ಲಿ ಕಲುಷಿತ ನೀರು ಸೇವನೆಯಿಂದ ಅಸ್ವಸ್ಥಗೊಂಡ ಪ್ರಕರಣಗಳು ದಾಖಲಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭೇಟಿ ನೀಡಿ ಪರಿಶೀಲಿಸಲಾಯಿತು.

ಕಾರ್ಯಪಾಲಕ ಅಭಿಯಂತರ ಎ.ಎಸ್.ರಂಜಿತ್ ಕುಮಾರ್ ಅವರು ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಿರಿಯ ಅಭಿಯಂತರರ ಜತೆಗೂಡಿ ನೀರು ಸಂಸ್ಕರಣಾ ಘಟಕಕ್ಕೆ ಪರಿಶೀಲಿಸಿ ನೀರಿನ ಪ್ರಮಾಣವನ್ನು ಪರಿಶೀಲಿಸಿದರು. ಜಲ ಸಂಗ್ರಹಾಗಾರದ ಬಳಿ ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ಪರಿಶೀಲಿಸಿ ಕೆಲವು ಸಲಹೆ ನೀಡಲಾಯಿತು.

ಈ ಬಗ್ಗೆ ಮಾತನಾಡಿದ ಎ.ಎಸ್.ರಂಜಿತ್ ಕುಮಾರ್, ಸಂಸ್ಕರಣಾ ಘಟಕದಿಂದ ಶುದ್ಧ ನೀರು ಸರಬರಾಜು ಆಗುತ್ತಿದ್ದರೂ ಗ್ರಾಮಗಳಲ್ಲಿ ಟ್ಯಾಂಕ್, ಕಿರು ಟ್ಯಾಂಕ್‌ಗಳನ್ನು ಶುಚಿಗೊಳಿಸಿಕೊಂಡರೆ ಸಮಸ್ಯೆಯಾಗಲ್ಲ. ನೀರಿನ ಪೈಪ್ ಒಡೆದಿದ್ದರೆ ತಕ್ಷಣ ಸರಿಪಡಿಸಿದರೆ ಕಲುಷಿತನೀರು ಸೇರದಂತೆ ತಡೆಯಬಹುದು ಎಂದರು.

Key words: mysore, Officials, visit , water, plant, inspection