ಜುಲೈ 7ರಂದು ‘ನೋಟಿನ ನಂಟು’ ಬಿಡುಗಡೆ

ಮೈಸೂರು,ಜುಲೈ,5,2024 (www.justkannada.in): ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ರಘುಪತಿ ತಾಮ್ಹನ್ ಕರ್ ಅವರ  ‘ನೋಟಿನ ನಂಟು’ ಮೊದಲ ಕೃತಿಯು ಜುಲೈ 7ರಂದು ಬೆಳಿಗ್ಗೆ 10.30ಕ್ಕೆ ಬಿಡುಗಡೆ ಆಗಲಿದೆ ಎಂದು ಕವಿತಾ ಪ್ರಕಾಶನದ ಗಣೇಶ ಅಮೀನಗಡ ತಿಳಿಸಿದರು.

ನಗರದ ಜೆಎಲ್ ಬಿ ರಸ್ತೆಯ ಎಂಜಿನಿಯರುಗಳ ಸಂಸ್ಥೆಯಲ್ಲಿ ಕವಿತಾ ಪ್ರಕಾಶನ ಏರ್ಪಡಿಸಿರುವ ಸಮಾರಂಭದಲ್ಲಿ ಪ್ರಸಿದ್ಧ ವಿದ್ವಾಂಸರೂ ಲೇಖಕರೂ ಆದ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಅವರು ಕೃತಿ ಬಿಡುಗಡೆಗೊಳಿಸಿ ಮಾತನಾಡುವರು ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಕೆನರಾ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ವಿಭಾಗೀಯ ಪ್ರಬಂಧಕರಾದ ಕೆ.ಗೋಪಾಲ ಹಾಗೂ ಬ್ಯಾಂಕ್ ಉದ್ಯೋಗಿ, ಲೇಖಕಿ ಡಾ.ಶುಭಶ್ರೀ ಪ್ರಸಾದ್ ಭಾಗವಹಿಸುವರು. ಹಿರಿಯ ಲೇಖಕ ಡಾ.ಸಿಪಿಕೆ ಅಧ್ಯಕ್ಷತೆ ವಹಿಸುವರು. ಎಪ್ಪತ್ತು ವರ್ಷ ವಯಸ್ಸಿನ ರಘುಪತಿ ತಾಮ್ಹನ್ ಕರ್ ಅವರು ತಮ್ಮ ವೃತ್ತಿ ಬದುಕಿನ ಸ್ವಾರಸ್ಯಕರ, ಅಪರೂಪದ ಘಟನೆಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ ಎಂದು ವಿವರಿಸಿದರು. ಲೇಖಕ ರಘುಪತಿ ತಾಮ್ಹನ್ ಕರ್ ಹಾಜರಿದ್ದರು.

Key words: mysore,  Release, Notina Nantu