ವಯನಾಡು ಗುಡ್ಡ ಕುಸಿತದಲ್ಲಿ ಮೈಸೂರು ಮೂಲದ ಮೂವರು ಸಾವು: ಮೃತರ ಸಂಖ್ಯೆ 282 ಕ್ಕೆ ಏರಿಕೆ

ಮೈಸೂರು,ಆಗಸ್ಟ್,1,2024 (www.justkannada.in):  ಕೇರಳದ ವಯನಾಡಿವಿನಲ್ಲಿ ಸಂಭವಿಸಿದ ಭೂ ಕುಸಿತ ದುರಂತದಲ್ಲಿ ಮೈಸೂರು ಮೂಲದ ಮೂವರು ಸಾವನ್ನಪ್ಪಿ  9 ಮಂದಿ ನಾಪತ್ತೆಯಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ಮೈಸೂರಿನ ತಿ.ನರಸೀಪುರದ  ತಾಲ್ಲೂಕಿನ ಉಕ್ಕಲಗೆರೆ ಗ್ರಾಮದ ನಿವಾಸಿಗಳಾದ ಸಾವಿತ್ರಿ, ಅಚ್ಚು, ಶ್ರೀಕುಟ್ಟಿ ಸಾವನ್ನಪ್ಪಿದವರು. ಗುರುಮಲ್ಲ, ಸಾವಿತ್ರಿ, ಸಬೀತಾ, ಶಿವಣ್ಣ, ಅಪ್ಪಣ್ಣ, ಅಶ್ವಿನಿ, ಜಿತು, ದಿವ್ಯ, ರತ್ನ ನಾಪತ್ತೆ ಆಗಿರುವವರು.

40 ವರ್ಷದ ಹಿಂದೆಯೇ ಕೇರಳದ ಚೂರಲ್ ಮಲ ದಲ್ಲಿ ಕುಟುಂಬಸ್ಥರು ನೆಲೆಸಿದ್ದು, ಇವರನ್ನು ಈ ಮೊದಲು ಮಂಡ್ಯ ಜಿಲ್ಲೆಯ ಮೂಲದವರು ಎನ್ನಲಾಗಿತ್ತು. ಸಾವು ಮತ್ತು ನಾಪತ್ತೆ ಆಗಿರುವವರ ಸಂಬಂಧಿ ಮಹದೇವಮ್ಮ ನಿರಾಶ್ರಿತ ಕೇಂದ್ರಲ್ಲಿದ್ದರು. ಇದೀಗ ಮಹದೇವಮ್ಮ ಅವರನ್ನು ಕರ್ನಾಟಕದ ನೂಡೆಲ್ ಅಧಿಕಾರಿಗಳು ಹುಡುಕಿದ್ದು, ಅವರು ಮಂಡ್ಯದವರು ಅಲ್ಲ, ತಿ.ನರಸೀಪುರದವರು ಎಂದು ಮಹದೇವಮ್ಮ ಮಾಹಿತಿ ನೀಡಿದ್ದಾರೆ.

ಉಕ್ಕಲಗೆರೆ ಗ್ರಾಮಕ್ಕೆ ನರಸೀಪುರ ತಹಸೀಲ್ದಾರ್ ಸುರೇಶ್ ಆಚಾರ್, ಕಂದಾಯಧಿಕಾರಿ ಶ್ಯಾಮ್ ಭೇಟಿ  ನೀಡಿ ಮೃತ ಕುಟುಂಬಸ್ಥರ ಸಂಬಂದಿಕರಿಂದ ಮಾಹಿತಿ ಪಡೆದಿದ್ದಾರೆ.

ಗುಡ್ಡ ಕುಸಿತ ಪ್ರಕರಣ: 282 ಕ್ಕೆ ಏರಿದ  ಸಾವಿನ ಸಂಖ್ಯೆ

ವಯನಾಡು ಗುಡ್ಡ ಕುಸಿತದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 282ಕ್ಕೆ ಏರಿಕೆಯಾಗಿದೆ. 300ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದು, 8 ಸಾವಿರಕ್ಕೂ ಹೆಚ್ಚು ಮಂದಿ ಸ್ಥಳಾಂತರ ಮಾಡಲಾಗಿದೆ.  ಸಾವಿನ‌ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇದರಲ್ಲಿ 16 ಮಂದಿ ಕರ್ನಾಟಕದವರು ಸಾವನ್ನಪ್ಪಿದ್ದಾರೆ.

ವಯನಾಡಿನ ಮೇಪ್ಪಾಡಿ ಬಳಿ ಚೂರಲ್ ಮಲ ಬಳಿ ನಡೆದ ಘನ ಘೋರ ದುರಂತಕ್ಕೆ ಸಾವಿರಾರು ಜನರ ಬದುಕು ಮೂರಾಬಟ್ಟೆಯಾಗಿದ್ದು, ಎನ್ ಡಿ ಆರ್ ಎಫ್,ಸೇನಾ ಕಾರ್ಯಾಚರಣೆ ಮುಂದುವರಿದೆ.

ಕುಳಿತ, ಮಲಗಿದ್ದ ಭಂಗಿಯಲ್ಲೇ ಮೃತದೇಹಗಳು ಪತ್ತೆಯಾಗುತ್ತಿದ್ದು  ಶವಗಾರದಲ್ಲಿ ತಮ್ಮವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.  82 ನಿರಾಶ್ರಿತರ ಕೇಂದ್ರಗಳನ್ನ ತೆರೆಯಲಾಗಿದ್ದು, 8 ಸಾವಿರಕ್ಕೂ ಹೆಚ್ಚು ಶಿಬಿರಾಶ್ರಿತರು ಆಶ್ರಯ ಪಡೆದಿದ್ದಾರೆ.

Key words: Mysore, Three people, die, Wayanad, landslide