ನಂದಿನಿ ಹಾಲಿನ ದರ ಏರಿಕೆ ಸಮರ್ಥಿಸಿಕೊಂಡ ಮೈಮುಲ್ ಅಧ್ಯಕ್ಷರು

ಮೈಸೂರು,ಮಾರ್ಚ್,29,2025 (www.justkannada.in): ಹಾಲಿನ ದರವನ್ನ 4 ರೂ. ಹೆಚ್ಚಳ ಮಾಡಿರುವ ಸರ್ಕಾರದ ನಿರ್ಧಾರವನ್ನ ಮೈಮುಲ್ ಅಧ್ಯಕ್ಷ ಚೆಲುವರಾಜು ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಮಾತನಾಡಿದ ಮೈಮುಲ್ ಅಧ್ಯಕ್ಷ ಚೆಲುವರಾಜು, ಯುಗಾದಿ ಹಬ್ಬದ ಸಂದರ್ಭದಲ್ಲಿ ಸರ್ಕಾರ ರೈತರಿಗೆ ವಿಶೇಷ ಕೊಡುಗೆ ನೀಡಿದೆ. ರೈತರ ಹಿತದೃಷ್ಟಿಯಿಂದ ಸರ್ಕಾರ ಒಳ್ಳೆಯ ‌ನಿರ್ಧಾರ ಮಾಡಿದೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳನ್ನ ತಿಳಿಸುತ್ತೇನೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ನಂದಿನಿ ಹಾಲಿನ ಬೆಲೆ ಕಡಿಮೆ ಇದೆ ಕೇರಳ, ತಮಿಳುನಾಡು, ಗುಜರಾತ್ ಭಾಗದಲ್ಲಿ ಸಾಮಾನ್ಯ ಹಾಲಿಗೆ 54 ರೂ ಇದೆ. ನಮ್ಮಲ್ಲಿ ಬೆಲೆ ಏರಿಕೆ ಮಾಡಿದರೂ ಕೂಡ ಸಾಮಾನ್ಯ ಹಾಲಿಗೆ 46 ರೂ ಇದೆ. ಈಗ ಹೆಚ್ಚಳ ಮಾಡಿರುವುದರಿಂದ ಗ್ರಾಹಕರಿಗೆ ಅಷ್ಟೇನು ಹೊರ ಆಗುವುದಿಲ್ಲ. ರೈತರು ಖರೀದಿಸುವ ಹುಲ್ಲು,ಇಂಡಿ,ಬೂಸ, ರಾಸುಗಳ ಸಾಕಾಣಿಕೆ ವೆಚ್ಚ, ದುಪ್ಪಾಟಾಗಿದೆ. ಹೈನೋದ್ಯಮ ಉತ್ತೇಜನಕ್ಕೆ ಇದು ಒಳ್ಳೆಯ ನಿರ್ಧಾರ ಎಂದರು.

ನಮ್ಮ ನಂದಿನಿ ಹಾಲು ಪರಿಶುದ್ಧ ಹಾಲು ಯಾವುದೇ ಕಲಬೆರಕೆ ಇರುವುದಿಲ್ಲ. ರೈತರಿಗಾಗಿ ಇರುವ ಸಂಸ್ಥೆ ನಮ್ಮದು. 4 ರೂ. ನಮ್ಮ ಒಕ್ಕೂಟಕ್ಕೆ ಬಳಸಿಕೊಳ್ಳುವುದಿಲ್ಲ ನೇರವಾಗಿ ರೈತರಿಗೆ ತಲುಪಿಸಲಾಗುತ್ತದೆ. ನಮ್ಮ ಸಂಸ್ಥೆ ಆರ್ಥಿಕ ಸಂಕಷ್ಟದಲ್ಲೇನು ಇಲ್ಲ. ಈ ವರ್ಷ ವಾರ್ಷಿಕ 6 ರಿಂದ 7 ಕೋಟಿ ಲಾಭದಲ್ಲಿ ಇದೆ ಎಂದು ಮೈಸೂರು ಹಾಲು ಒಕ್ಕೂಟದ ಅಧ್ಯಕ್ಷ ಚೆಲುವರಾಜು ಹೇಳಿದರು.

ಬೇಸಿಗೆ ಸಂದರ್ಭದಲ್ಲಿ ನಂದಿನಿ ಮಜ್ಜಿಗೆ, ಮೊಸರು,ಲಸ್ಸಿ, ಬಾದಾಮ್ ಮಿಲ್ಕ್ ಸೇರಿದಂತೆ ತಂಪು ಪಾನೀಯಗಳ ಬೇಡಿಕೆ ದುಪ್ಪಟ್ಟಾಗಿದೆ. ಬೇಡಿಕೆಗೆ ಅನುಗುಣವಾಗಿ ನಮ್ಮ ಪ್ರೊಡಕ್ಷನ್ ಆಗುತ್ತಿದೆ. ಅದಕ್ಕೆ ಅನುಗುಣವಾಗಿ ನಮ್ಮ ಪ್ರೊಡಕ್ಷನ್ ಟೀಮ್ ಸಿದ್ದವಿದೆ. ಸಾಮಾನ್ಯ ದಿನಗಳಿಗಿಂತ ಬೇಸಿಗೆ ಸಂಧರ್ಭದಲ್ಲಿ ಪ್ರತಿದಿನ 1 ಲಕ್ಷ ಲೀಟರ್ ನಷ್ಟು ಮೊಸರು,ಮಜ್ಜಿಗೆ ಮಾರಾಟವಾಗುತ್ತದೆ. ಬೇಡಿಕೆ ಎಷ್ಷೇ ಬಂದರೂ ಪೂರೈಕೆ ಮಾಡುವ ನಿಟ್ಟಿನಲ್ಲಿ ನಾವು ಸಿದ್ದರಿದ್ದೇವೆ ಎಂದು ಮೈಮುಲ್ ಅಧ್ಯಕ್ಷ ಚೆಲುವರಾಜು ತಿಳಿಸಿದರು.

Key words: Mymul president, defends, Nandini milk, price hike