9 ಮಂದಿ ಜೈಲು ಅಧಿಕಾರಿಗಳ ಸಸ್ಪೆಂಡ್: MUDA ಆಯುಕ್ತರ ಮೇಲೆ ಯಾಕಿಲ್ಲ ಕ್ರಮ-ಮಾಜಿ ಮೇಯರ್ ಶಿವಕುಮಾರ್

ಮೈಸೂರು,ಆಗಸ್ಟ್,30,2024 (www.justkannada.in):  ನಟ ದರ್ಶನ್ ಕಾರಾಗೃಹದಲ್ಲಿ ಐಷರಾಮಿಯಾಗಿದ್ದ ಘಟನೆ ಬಹಿರಂಗಗೊಳ್ಳುತ್ತಿದ್ದಂತೆ, ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ದ ಕ್ರಮ ಜರುಗಿಸಿದ ರಾಜ್ಯ ಸರಕಾರ, ಮುಡಾ ಹಗರಣದಲ್ಲಿ ಮಾತ್ರ ಯಾಕೆ ಅಧಿಕಾರಿಗಳನ್ನು ರಕ್ಷಿಸುತ್ತಿದೆ. ಈ ತನಕ ಯಾವೊಬ್ಬ ಅಧಿಕಾರಿಗಳ ಮೇಲೂ ಯಾಕೆ ಕ್ರಮ ಜರುಗಿಸಿಲ್ಲ ಎಂದು ಮಾಜಿ ಮೇಯರ್ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಇಂದು ‘ಜಸ್ಟ್ ಕನ್ನಡ ಡಾಟ್ ಇನ್’ ಜೊತೆ ಮಾತನಾಡಿದ ಮಾಜಿ ಮೇಯರ್ ಶಿವಕುಮಾರ್, ಜೈಲಿನಲ್ಲಿ ನಟ ದರ್ಶನ್ ಗೆ ರಾಜಾತಿಥ್ಯ ನೀಡಿದ ವಿಚಾರವನ್ನ ಗಂಭೀರವಾಗಿ ಪರಿಗಣಿಸಿ 7 ಜನ ಜೈಲು ಸಿಬ್ಬಂದಿಯನ್ನ ಸಸ್ಪೆಂಡ್ ಮಾಡಿದ್ದೀರಿ. ಆದರೆ  ಮುಡಾದಲ್ಲಿ 5 ಸಾವಿರ ಕೋಟಿ ಹಗರಣ ಆಗಿದೆ. ಸಾವಿರಾರು ಸೈಟುಗಳನ್ನ ಮನಸೋ ಇಚ್ಚೆ ಕೊಟ್ಟಿದ್ದಾರೆ. ಆದರೂ ಯಾವುದೇ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಂಡಿಲ್ಲವೇಕೆ ಎಂದು ಪ್ರಶ್ನಿಸಿದರು.

ಜೈಲು ಅಧಿಕಾರಿಗಳ ವಿರುದ್ದ ಕ್ರಮ ತಪ್ಪು ಅಂತಾ ಹೇಳಲ್ಲ. ಆದರೆ ಮುಡಾ ಹಗರಣದಲ್ಲಿ ಅಕ್ರಮವೆಸಗಿದ ಮುಡಾ ಅಧಿಕಾರಿಗಳ  ವಿರುದ್ದ ಯಾಕೆ ಕ್ರಮ ಕೈಗೊಂಡಿಲ್ಲ. ಇದನ್ನ ನೋಡಿದರೇ ಸರ್ಕಾರದ ಪಾತ್ರವಿದೆ. ಎಲ್ಲರ ಪಾತ್ರವಿದೆ ಎಂಬುದು ತಿಳಿಯುತ್ತದೆ ಎಂದರು.

ಹಾಗೆಯೇ ಭ್ರಷ್ಟಾಚಾರ ಮಾಡಿದ, ಸಾವಿರಾರ ಸೈಟುಗಳನ್ನು ಮನಸೋ ಇಚ್ಚೆ ನೀಡಿ  ಸಾವಿರಾರು ಕೋಟಿ ನಷ್ಟ ಮಾಡಿದ ಅಧಿಕಾರಿ ಹಾಗೂ ಮಾಜಿ ಮುಡಾ ಆಯುಕ್ತರನ್ನ  ಕುಲಸಚಿವರನ್ನಾಗಿ ನೇಮಕ ಮಾಡಿದ್ದೀರಿ.  ಸರ್ಕಾರಕ್ಕೆ ನಾಚಿಕೆ ಇಲ್ಲವಾ?  ಮಾನ ಮರ್ಯಾದೆ ಇಲ್ಲವಾ..? ಇದು ರಾಜ್ಯಾದ್ಯಂತ ಸುದ್ದಿಯಾಗಿದೆ  ಎಲ್ಲರೂ ತಲೆತಗ್ಗಿಸುವ ಕೆಲಸ ಮಾಡಿರುವ ಅಧಿಕಾರಿಯನ್ನ ಕುಲಸಚಿವರನ್ನಾಗಿ ಮಾಡಿರುವುದು ನಿಮ್ಮ ಆಡಳಿತದ ವೈಖರಿಯನ್ನ ತೋರಿಸುತ್ತದೆ ಎಂದು ಶಿವಕುಮಾರ್ ಕಿಡಿಕಾರಿದರು.

Key words: No Action, MUDA Commissioner, Former Mayor Shivakumar