ಯಾವುದೇ ಬಿಪಿಎಲ್ ಕಾರ್ಡ್ ಗಳ ರದ್ದು ಇಲ್ಲ: ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು,ಸೆಪ್ಟಂಬರ್,11,2024 (www.justkannada.in):  ರಾಜ್ಯದಲ್ಲಿ ಯಾವುದೇ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಯಾವುದೇ ಬಿಪಿಎಲ್ ಕಾರ್ಡ್‌ಗಳನ್ನು ಕಡಿತ ಮಾಡುವುದಿಲ್ಲ. ತೆರಿಗೆ ಪಾವತಿ ಮಾಡುತ್ತಿರುವ ಕುಟುಂಬಸ್ಥರು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಲ್ಲ ಎಂಬುದು ನಿಯಮದಲ್ಲಿದೆ. ಐಟಿ ರಿಟರ್ನ್  ಫೈಲ್ ಮಾಡುವವರಿಗೆ ಬಿಪಿಎಲ್ ಕಾರ್ಡ್ ಗೆ ಅರ್ಹತೆ ಇಲ್ಲ ಸುಳ್ಳು ದಾಖಲೆ ಕೊಟ್ಟು ಅಧಿಕಾರಿಗಳ ಮನವೊಲಿಸಿ ಕಾರ್ಡ್ ಪಡೆದಿರುವುದು ತಪ್ಪಲ್ಲವೇ? ಎಂದು ಪ್ರಶ್ನಿಸಿದರು.

ಸರ್ಕಾರ ಬಡವರ ಅನ್ನ ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂಬ  ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ  ತಿರುಗೇಟು ಕೊಟ್ಟ ಸಚಿವ ಪರಮೇಶ್ವರ್, ಏನೋ ಹೇಳುತ್ತಾರೇ ಪಾಪ. ಹೆಚ್.ಡಿ.ಕುಮಾರಸ್ವಾಮಿ ಅವರು ದೊಡ್ಡ ಜವಾಬ್ದಾರಿಯಲ್ಲಿದ್ದಾರೆ. ರಾಜ್ಯಕ್ಕೆ ದೊಡ್ಡ ಕೈಗಾರಿಕೆ, ಸ್ಟೀಲ್ ಇಂಡಸ್ಟ್ರೀಸ್ ನೀಡಲಿ. ದೊಡ್ಡ ದೊಡ್ಡ ಕೆಲಸ ಮಾಡಲಿ ಎಂದರು.

ಸಿಎಂ ಸ್ಥಾನದ ಚರ್ಚೆಗೆ ಕಡಿವಾಣ ಹಾಕಲು ಪಕ್ಷದ ಅಧ್ಯಕ್ಷರು ಕ್ರಮ ಕೈಗೊಳ್ಳುತ್ತಾರೆ. ಸದ್ಯ ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿಕೆ ಶಿವಕುಮಾರ್ ಅವರು ಅಮೆರಿಕಾ ಪ್ರವಾಸದಲ್ಲಿದ್ದಾರೆ. ಅವರ ಮರಳಿ ಬಂದನಂತರ ಈ ಬಗ್ಗೆ ಗಮನ ಹರಿಸುತ್ತಾರೆ ಎಂದರು.

Key words: No cancellation, any, BPL cards, Dr. G. Parameshwar