ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆಯಾಗಿಲ್ಲ- ಶಾಸಕ ತನ್ವೀರ್ ಸೇಠ್  

ಮೈಸೂರು,ಆಗಸ್ಟ್,27,2024 (www.justkannada.in): ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಸ್ಪಷ್ಟನೆ ನೀಡಿದರು.

ಎನ್ ಆರ್ ಕ್ಷೇತ್ರ ವ್ಯಾಪ್ತಿಯ ಕುರಿಮಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು  ಶಾಸಕ ತನ್ವಿರ್ ಸೇಠ್ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ. ರಾಜ್ಯ ಹಣಕಾಸು ಯೋಜನೆಯಡಿ 15ಕೋಟಿ ಅನುದಾನದ ಕಾಮಗಾರಿಗೆ ಚಾಲನೆ ಕೊಟ್ಟಿದ್ದೇನೆ. ಕಳೆದ ವಾರ 5ಕೋಟಿ ಕಾಮಗಾರಿಗೆ ಚಾಲನೆ ನೀಡಿದ್ದೆ. ಈಗ 5ಕೋಟಿ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಕಡೆ ಗಮನ ಕೊಟ್ಟಿದ್ದೇನೆ ಎಂದರು.

ಸಿಎಂ ಬದಲಾವಣೆ ಬಗ್ಗೆ ಚರ್ಚೆಯಾಗಿಲ್ಲ. ಕಾಂಗ್ರೆಸ್ 135 ಶಾಸಕರನ್ನ ಹೊಂದಿರುವ ಪಕ್ಷ. ರಾಜ್ಯದ ಜನತೆಯ ಆಶೀರ್ವಾದ ಪಡೆದು ಆಯ್ಕೆಯಾಗಿದ್ದಾರೆ. ಸಚಿವ ಸಂಪುಟ ಪುನರ್ ರಚನೆ ಮಾಡುವ ಬಗ್ಗೆ ಚರ್ಚೆ ಆಗಿದೆ ಎಂದರು.

ಸಿಎಂ ವಿರುದ್ಧ ಬಿಜೆಪಿ, ಜೆಡಿಎಸ್ ನಾಯಕರು ದ್ವೇಷ ರಾಜಕಾರಣ ಪ್ರಾರಂಭ ಮಾಡಿದ್ದಾರೆ. ಮುಡಾ ಅಕ್ರಮದಲ್ಲಿ ಸಿಎಂ ಹಸ್ತಕ್ಷೇಪದ ಬಗ್ಗೆ ಒಂದು ದಾಖಲೆ ಇಲ್ಲ. ಹೀಗಿದ್ದರೂ ಬಿಜೆಪಿ ಜೆಡಿಎಸ್ ನಾಯಕರು ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹ ಮಾಡುತ್ತಿದ್ದಾರೆ. ಕಾನೂನಿನ ಮೂಲಕ ನಮಗೆ ನ್ಯಾಯ ಸಿಗುತ್ತದೆ ಎಂದು  ಶಾಸಕ ತನ್ವಿರ್ ಸೇಠ್ ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ಆಗಿದೆ.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ತನ್ವಿರ್ ಸೇಠ್, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ಆಗಿದೆ. ಕಾಲ ಕಾಲಕ್ಕೆ ಬದಲಾವಣೆ ಆಗೋದು ಸರ್ವೇ ಸಾಮಾನ್ಯ. ಡಿಕೆ ಶಿವಕುಮಾರ್ ಗಿಂತ ಸಮರ್ಥ ನಾಯಕನ ಹುಡುಕಾಟದಲ್ಲಿ ಪಕ್ಷ ಇದೆ. ಡಿ.ಕೆ ಶಿವಕುಮಾರ್ ಪಕ್ಷ ಕಷ್ಟದಲ್ಲಿದ್ದ ವೇಳೆ ಅಧಿಕಾರ ಸ್ವೀಕರಿಸಿದರು. ಮೂರು ವರ್ಷ ಯಶಸ್ವಿಯಾಗಿ ಅಧಿಕಾರ ನಡೆಸಿದ್ದಾರೆ. ಒಬ್ಬರು ಒಂದು ಉದ್ಯೋಗದಲ್ಲಿ ಇರಬೇಕೆಂಬುದು ಬಗ್ಗೆ ಚರ್ಚೆ ಆಗಿದೆ. ಡಿಕೆ ಶಿವಕುಮಾರ್ ಡಿಸಿಎಂ ಆಗಿ ಕೂಡ ಕೆಲಸ ಮಾಡುತ್ತಿದ್ದಾರೆ. ಸಾಕಷ್ಟು ಒತ್ತಡ ಅವರಿಗೂ ಕೂಡ ಇರುತ್ತದೆ. ಹಾಗಾಗಿ ಬದಲಾವಣೆ ಬಗ್ಗೆ ಚರ್ಚೆ ನಡೆದಿದೆ. ಸಮರ್ಥ ವ್ಯಕ್ತಿ ಸಿಕ್ಕಾಗ ಯಾವಾಗ ಬೇಕಾದರೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಸಾಧ್ಯತೆ ಇದೆ ಎಂದರು.

Key words: no discussion, change, CM, MLA, Tanveer Sait