ಕೇಂದ್ರ ವಾರ್ತಾ ಶಾಖೆ ನಿರ್ದೇಶಕ ಡಾ ಎಚ್‌.ಆರ್‌. ಕೇಶವಮೂರ್ತಿ ನಿಧನ

ಮೈಸೂರು,ಆಗಸ್ಟ್, 28,2024 (www.justkannada.in): ನವದೆಹಲಿಯ ಕೇಂದ್ರ ವಾರ್ತಾ ಶಾಖೆ(PIB) ಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಕರ್ನಾಟಕದ ಡಾ ಎಚ್‌.ಆರ್‌. ಕೇಶವಮೂರ್ತಿ ಅವರು ಇಂದು ನಿಧನರಾದರು.

ಡಾ ಎಚ್‌.ಆರ್‌. ಕೇಶವಮೂರ್ತಿ ಅವರಿಗೆ 59 ವರ್ಷ ವಯಸ್ಸಾಗಿತ್ತು. 1995ರ ಶ್ರೇಣಿಯ ಭಾರತೀಯ ಸಮಾಚಾರ ಸೇವಾ ಅಧಿಕಾರಿಯಾಗಿದ್ದ ಕೇಶವಮೂರ್ತಿ ಅವರು ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರು. ಮೈಸೂರಿನಲ್ಲಿ ಕೊನೆಯುಸಿರೆಳೆದರು ಎಂದು ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ.

ಡಾ ಎಚ್‌.ಆರ್‌. ಕೇಶವಮೂರ್ತಿ  ಅವರು ಪತ್ನಿ, ಓರ್ವ ಪುತ್ರಿ, ಓರ್ವ ಪುತ್ರನನ್ನು ಅಗಲಿದ್ದಾರೆ. ಕೇಶವಮೂರ್ತಿ ಅವರು ಹಲವಾರು ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರು.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ನಗರಾಭಿವೃದ್ಧಿ ಸಚಿವಾಲಯ, ಕೃಷಿ ಸಚಿವಾಲಯ, ದೂರ ಸಂಪರ್ಕ ಸಚಿವಾಲಯ ಹಾಗೂ ಈಶಾನ್ಯದ ಅರುಣಾಚಲ ಪ್ರದೇಶದ ಇಟಾ ನಗರದಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿದ್ದರು.

ಕೇಶವಮೂರ್ತಿ ಅವರ ನಿಧನಕ್ಕೆ ಪಿ.ಐ.ಬಿ. ಕರ್ನಾಟಕ ವಲಯದ ಹೆಚ್ಚುವರಿ ಮಹಾ ನಿರ್ದೇಶಕರಾದ ಎಸ್.ಜಿ. ರವೀಂದ್ರ ಹಾಗೂ ಕೇಂದ್ರ ಸಂವಹನ ಇಲಾಖೆಯ ಹಿರಿಯ ಅಧಿಕಾರಿಗಳು, ಸಿಬ್ಬಂದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Key words: PIB,  Director,  Dr H.R. Kesavamurthy,  passed away