ಯುವಕನಿಂದ ಚಾಮುಂಡಿ ಬೆಟ್ಟದ ಅರ್ಚಕರ ಮೇಲೆ ಹಲ್ಲೆ

ಮೈಸೂರು,ಫೆಬ್ರವರಿ,14,2025 (www.justkannada.in): ಮೈಸೂರಿನ ಚಾಮುಂಡಿ ಬೆಟ್ಟ ದೇವಾಲಯದ ಅರ್ಚಕ  ದೇವಪ್ರಸಾದ್ ದೀಕ್ಷಿತ್  ಅವರ  ಮೇಲೆ ಯುವಕನೊಬ್ಬ ಹಲ್ಲೆ ಮಾಡಿ ಹುಚ್ಚಾಟ ನಡೆಸಿರುವ ಘಟನೆ ನಡೆದಿದೆ.

ಸಿದ್ದಾರ್ಥ ಬಡಾವಣೆಯ ಶಾಂತಲಾ ಶಾಲೆ ಮುಖ್ಯಸ್ಥ ಪ್ರೊ. ಸಂತೋಷ್ ಮಗ ಸಿದ್ದಾಂತ್  ಎಂಬಾತ ಅರ್ಚಕ ದೇವಪ್ರಸಾದ್ ದೀಕ್ಷಿತ್ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ದೇವಪ್ರಸಾದ್ ದೀಕ್ಷಿತ್  ಅವರ ಕುಟುಂಬ ಮೈಸೂರಿನ‌ ಸಿದ್ದಾರ್ಥ ನಗರ ಬಡಾವಣೆಯಲ್ಲಿ ವಾಸಿಸುತ್ತಿದ್ದು,  ಅದೇ ಬಡಾವಣೆಯಲ್ಲಿ ಪ್ರೊ. ಸಂತೋಷ್ ಕುಟುಂಬ ಸಹ ಇದೆ.

ಈ ಮಧ್ಯೆ ಸಿದ್ದಾಂತ್  ಸೋಮವಾರ ರಾತ್ರಿ 9 ಗಂಟೆ ಸಮಯದಲ್ಲಿ ಏಕಾಏಕಿ ದೇವಪ್ರಸಾದ್ ದೀಕ್ಷಿತ್ ಅವರ ಮನೆಗೆ ನುಗ್ಗಿ ಹಣ ಕೊಡುವಂತೆ ಪೀಡಿಸಿದ್ದಾನೆ. ಹಣ ಕೊಡದಿದ್ದಾಗ ದೇವಪ್ರಸಾದ್ ದೀಕ್ಷಿತ್ ಮುಖಕ್ಕೆ ಗುದ್ದಿ, ಗಾಯಗೊಳಿಸಿದ್ದು, ಆ ವೇಳೆಗೆ ಮನೆಗೆ ಬಂದ ದೇವಪ್ರಸಾದ್ ದೀಕ್ಷಿತ್ ಮಗ ಸುದೇವ್ ನೆರೆಹೊರೆಯವರ ಸಹಾಯ ಪಡೆದು ಸಿದ್ದಾಂತ್ ನನ್ನು ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ಇನ್ನು ಮಗನ ಹುಚ್ಚಾಟದ ವಿಚಾರ ಗೊತ್ತಾಗಿ ಪ್ರೊ. ಸಂತೋಷ್ ಪತ್ನಿ ಹಾಗೂ ಸಿದ್ದಾಂತ್ ತಾಯಿಯು  ದೀಕ್ಷಿತ್ ರ ಮನೆಗೆ ಬಂದು ಗೋಳಾಡಿದ್ದಾರೆ. ಸಿದ್ದಾಂತ್ ತಾಯಿಯ ಗೋಳಾಟ ಕಂಡು ಮರುಗಿದ ದೇವ ಪ್ರಸಾದ್ ಕುಟುಂಬ ಫೊಲೀಸರಿಗೆ ದೂರು ಕೊಡಲು ಹಿಂದೇಟು ಹಾಕಿದ್ದಾರೆ.

Key words: Drug addict, youth, Attack, priests, Chamundi Hills