ಮೈಸೂರಿನಲ್ಲಿ ಬಿ.ವೈ ವಿಜಯೇಂದ್ರ ವಿರುದ್ದ ಪ್ರತಿಭಟನೆ.

ಮೈಸೂರು,ಮೇ,29,2024 (www.justkannada.in): ಎಸ್ ಟಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿದ  ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಮೈಸೂರಿನಲ್ಲಿ ನಾಯಕ ಸಮುದಾಯ ಪ್ರತಿಭಟನೆ ನಡೆಸಿತು.

ನಗರದ ಸುಣ್ಣದಕೇರಿ ಮಹದೇಶ್ವರ ಸ್ವಾಮಿ ದೇವಸ್ಥಾನದ ಬಳಿ  ಮಾಜಿ ನಗರ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು . ಪ್ರತಿಭಟನೆಯಲ್ಲಿ ಹಲವು ಜನರು ಭಾಗಿಯಾಗಿದ್ದರು. ವಿಜಯೇಂದ್ರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಧಿಕಾರಿ  ಚಂದ್ರಶೇಖರ್  ಬಹುಕೋಟಿ ಅಕ್ರಮ‌ ಬಯಲಿಗೆಳೆದು ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣ ಸಂಬಂಧ ವಿಪಕ್ಷ ಬಿಜೆಪಿ ನಾಯಕರು ಆಡಳಿತ ರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿ, ಸಚಿವ ಬಿ ನಾಗೇಂದ್ರ ರಾಜಿನಾಮೆ ನೀಡಲು ಒತ್ತಾಯಿಸಿದ್ದರು.

ಸಚಿವ ರಾಜಿನಾಮೆ ಆಗ್ರಹಿಸಿದ ಬಿಜೆಪಿ ಬಿ.ವೈ  ವಿಜಯೇಂದ್ರ ವಿರುದ್ಧ ಪ್ರತಿಭಟನೆ ನಡೆಸಿದ ನಾಯಕ ಸಮುದಾಯದ ಮುಖಂಡರು, ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ತನಿಖೆ ಮಾಡುತ್ತಾರೆ.  ಶಿಕ್ಷೆ ನೀಡುತ್ತೇವೆ ಎಂದು ನಾಗೇಂದ್ರ ಅವರು ಹೇಳಿದರೂ ಅವರ ಮೇಲೆ ಉದ್ದೇಶ ಪೂರ್ವಕವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ. ಇದು ಖಂಡನೀಯ ಬಿಜೆಪಿಯು  ನಾಯಕ ಸಮುದಾಯವನ್ನ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ವಿಜಯೇಂದ್ರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆ ವೇಳೆ ಮಾತನಾಡಿದ ಲೋಕೇಶ್ ಪಿಯಾ, ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪು ಮಾಡಿದವರ ವಿರುದ್ದ ಎಫ್ ಐಆರ್ ದಾಖಲಿಸಿ ಜೈಲಿಗೆ ಕಳುಹಿಸಬೇಕು ಎಂದು ಸಚಿವ ಬಿ. ನಾಗೇಂದ್ರ ಅವರು ಹೇಳಿದರೂ ಕೂಡ ಉದ್ದೇಶಪೂರ್ವಕವಾಗಿ ಬಿವೈ ವಿಜಯೇಂದ್ರ ಅವರು ನಮ್ಮ ಸಮುದಾಯದ  ಬಿ.ನಾಗೇಂದ್ರ ಅವರನ್ನ ಟಾರ್ಗೆಟ್ ಮಾಡಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ಮೂಲಕ ನಾಯಕ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ಪುಗಸಟ್ಟೆ ಪ್ರಚಾರಕ್ಕಾಗಿ ಈ ರೀತಿ ಹೇಳಿಕೆ ನೀಡಿದ್ದಾರೆ.  ರಾಜೀನಾಮೆಗೆ ಒತ್ತಾಯಿಸಿರುವುದು ಸರಿಯಿಲ್ಲ. ಬಿಜೆಪಿಯವರಿಗೆ ಅಪಪ್ರಚಾರ ಮಾಡುವುದೇ ಕುಲಕಸುಬಾಗಿದೆ. ಇದೇ ರೀತಿ ರಾಜೀನಾಮೆಗೆ ಒತ್ತಾಯಿಸಿದರೇ ನಮ್ಮ ಸಮುದಾಯದವರು ಇಡೀ ರಾಜ್ಯಾದ್ಯಂತ ಬಿವೈ ವಿಜಯೇಂದ್ರ ವಿರುದ್ದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Key words: Protest, against , B.Y Vijayendra, Mysore