ಮೂಲಸೌಕರ್ಯ ಕೋರಿ ಮೈಸೂರು ಜಿಲ್ಲಾಡಳಿತದ ವಿರುದ್ದ ಜು.15ರಂದು ಬೃಹತ್ ಪ್ರತಿಭಟನೆ

ಮೈಸೂರು,ಜೂನ್,29,2024 (www.justkannada.in): ದಶಕಗಳಿಂದ ಸಮಸ್ಯೆ ನಡುವೆ ಜೀವನ ಸಾಗಿಸುತ್ತಿರುವ ಖಾಸಗಿ ಬಡಾವಣೆ ನಿವಾಸಿಗಳ ಕೂಗಿಗೆ ಜಿಲ್ಲಾಡಳಿತ ಸೂಕ್ತ ರೀತಿಯಲ್ಲಿ ಸ್ಪಂಧಿಸದಿರುವುದನ್ನು ಖಂಡಿಸಿ ಮೈಸೂರು ಪೂರ್ವ ವಲಯ ಬಡಾವಣೆಗಳ ಒಕ್ಕೂಟದ ಆಶ್ರಯದಲ್ಲಿ ಜುಲೈ15ರಂದು ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.

ನಗರ ಹೊರವರ್ತುಲ ರಸ್ತೆಯಿಂದ ಪೂರ್ವಭಾಗದಲ್ಲಿರುವ 27 ಖಾಸಗಿ ಬಡಾವಣೆಗಳ ಸಂಘಟನೆಗಳು ಒಟ್ಟಾಗಿ ಸೇರಿ ರಚಿಸಲಾಗಿರುವ ಮೈಸೂರು ಪೂರ್ವ ವಲಯ ಬಡಾವಣೆಗಳ ಒಕ್ಕೂಟದ ಆಶ್ರಯದಲ್ಲಿ ಇಂದು ಮಾನಸಿನಗರ ಬಡಾವಣೆಯಲ್ಲಿ ಇಂದು ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ  ಎಲ್ಲಾ ಸಂಘಟನೆಗಳು ಮೂಲಸೌಕರ್ಯ ಕೋರಿ ಮೈಸೂರು ಜಿಲ್ಲಾಡಳಿತದ ವಿರುದ್ದ ಜುಲೈ 15 ರಂದು ಬೃಹತ್ ಪ್ರತಿಭಟನೆ ನಡೆಸುವ ನಿರ್ಧಾರಕ್ಕೆ ಸಹಮತ ಸೂಚಿಸಿದವು.

ಒಕ್ಕೂಟದ ಅಡಿಯಲ್ಲಿರುವ ಪೂರ್ವ ವಲಯದ 27 ಬಡಾವಣೆಗಳಲ್ಲಿ, ರಸ್ತೆ, ಕುಡಿಯಲು  ಕಾವೇರಿ ನೀರು, ಒಳಚರಂಡಿ, ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಕರ್ಯಕ್ಕಾಗಿ ಪ್ರಬಲವಾಗಿ ಒತ್ತಡ ಹೇರಬೇಕು ಎಂದು  ಒಕ್ಕೂಟದ ಎಲ್ಲಾ ಸದಸ್ಯರು ಹೇಳಿದರು.

ಸಭೆಯಲ್ಲಿ ಸುದೀರ್ಘವಾದ ಚರ್ಚೆ ನಡೆದ ಬಳಿಕ ಅಂತಿಮವಾಗಿ ಜುಲೈ 15ರಂದು ಬೆಳಗ್ಗೆ 9.30ಕ್ಕೆ ದೇವೇಗೌಡ ವೃತ್ತದ ಸಮೀಪವಿರುವ ಕೆಎಂಎಫ್ ಬಡಾವಣೆಯ ಉದ್ಯಾನವನದಲ್ಲಿ ಜಮಾಯಿಸಿ ನಂತರ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಮೂಲಕ ಜಾಥಾದಲ್ಲಿ ತೆರಳಲು  ಸಭೆಯಲ್ಲಿ ನಿರ್ಧರಿಸಲಾಗಿದೆ.

ಸಭೆಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಉಪಾಧ್ಯಕ್ಷ ಎಂ.ಎಚ್. ಚೆಲುವೇಗೌಡ, ಕಾರ್ಯದರ್ಶಿ ಎಲ್. ಪ್ರಕಾಶ್, ಸಹಕಾರ್ಯದರ್ಶಿ ಎಂ.ಎಲ್. ಅರುಣ್, ಸಂಘಟನಾ ಕಾರ್ಯದರ್ಶಿ ಬೊಮ್ಮೇಗೌಡ, ಸಹ ಸಂಘಟನಾ ಕಾರ್ಯದರ್ಶಿ ಡಿ. ಕೃಷ್ಣೇಗೌಡ, ಖಜಾಂಚಿ ನರಸಿಂಹೇಗೌಡ, ಮಾಧ್ಯಮ‌ ಕಾರ್ಯದರ್ಶಿ ಎಚ್.ಎಸ್.‌ರಾಘವೇಂದ್ರ ಭಟ್ ಸೇರಿದಂತೆ ಒಕ್ಕೂಟದ ನಿರ್ದೇಶಕರು, 27 ಖಾಸಗಿ ಬಡಾವಣೆಗಳ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Key words: protest, Mysore, district administration, infrastructure