ರೇಣುಕಾಸ್ವಾಮಿ ಕೊಲೆ ಕೇಸ್: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚುವ ಯತ್ನ ನಡೆದಿಲ್ಲ-ಸಚಿವ ದಿನೇಶ್ ಗುಂಡೂರಾವ್.

ಮೈಸೂರು,ಜೂನ್,19,2024 (www.justkannada.in) ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚುವ ಯತ್ನ ನಡೆಯುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ. ಆ ರೀತಿ ಏನು ಆಗಿಲ್ಲ ಎಂದಿದ್ದಾರೆ.

ಇಂದು ಮೈಸೂರನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಇದೊಂದು ಅಮಾನವೀಯ ಘಟನೆ. ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡುವ ಮಾತೇ ಇಲ್ಲ. ಇದು ನನ್ನ ಗಮನಕ್ಕೆ ಬಂದಿಲ್ಲ. ಪೊಲೀಸರು ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳುತ್ತಾರೆ ತನಿಖೆಗೆ ಸರ್ಕಾರ ಎಲ್ಲಾ ಸಹಕಾರ ಕೊಡುತ್ತಿದೆ. ತಪ್ಪಿತಸ್ಥರಿಗೆ ತಕ್ಕ  ಶಿಕ್ಷೆ ಆಗಬೇಕು ಎಂದರು.

ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ, ಸಮಾಜದಲ್ಲಿ ಇಂತಹ ಘಟನೆಗಳು ನಡೆಯಬಾರದು. ಕೋಪದಲ್ಲಿ ಇಂತಹ ಘಟನೆಗಳು ಆಗುತ್ತವೆ, ಈ ಹಿಂದೆಯೂ ಆಗಿವೆ. ಸರ್ಕಾರಗಳು ಇಂತಹ ಘಟನೆಗಳ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ನಾನೇ ಸರಿ, ನಾನು ಮಾಡಿದ್ದೇ ಸರಿ ಎನ್ನುವ ಅತಿರೇಕದ ವರ್ತನೆ ಜಾಸ್ತಿಯಾದಾಗ ಈ ರೀತಿಯ ಘಟನೆಗಳು ನಡೆಯುತ್ತವೆ. ಇಂತಹ ಘಟನೆಗಳು ಸಮಾಜಕ್ಕೆ ಒಳ್ಳೆಯದಲ್ಲ ಎಂದರು.

ಗ್ಯಾರಂಟಿ ಯೋಜನೆ ಹಾಗೂ ಬೆಲೆ ಏರಿಕೆಗೆ ಸಂಬಂಧವಿಲ್ಲ

ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್,  ಬೇರೆ ರಾಜ್ಯಗಳಿಗೆ ಹೊಲಿಕೆ ಮಾಡಿದ್ರೆ ನಮ್ಮ ರಾಜ್ಯದಲ್ಲಿ ಬೆಲೆ ಕಡಿಮೆ ಇದೆ. ಈ ಹಿಂದೆ ಬೊಮ್ಮಾಯಿ ಕೇಂದ್ರ ಸರ್ಕಾರ  ಮೇಲೆ ಒತ್ತಡ ತಂದು ಬೆಲೆ ಇಳಿಕೆ ಮಾಡಿದ್ರು. ಆಂಧ್ರಪ್ರದೇಶ ತೆಲಂಗಾಣಕ್ಕೆ ಹೋಲಿಸಿದ್ರೆ ನಮ್ಮಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಇದೆ. ಗ್ಯಾರೆಂಟಿ ಹಾಗೂ ಬೆಲೆ ಏರಿಕೆಗೆ ಸಂಬಂಧವಿಲ್ಲ ಗ್ಯಾರೆಂಟಿ ಯೋಜನೆಗಳಿಗೆ ಖರ್ಚು ಮಾಡುತ್ತಿರುವ ಹಣ ಕಡಿಮೆ ಅಲ್ಲ. ಅದು ನಮ್ಮ ಬಡ ಜನರಿಗೆ ಸಹಾಯ ಆಗುತ್ತಿದೆ. ಸರ್ಕಾರದಿಂದ ಒಳ್ಳೆ ಕಾರ್ಯಕ್ರಮ ತಂದಿದ್ದೇವೆ. ಅದನ್ನು ತೆಗೆಯುವ ಪ್ರಶ್ನೆ ಇಲ್ಲ. ಏನಾದರೂ ಬದಲಾವಣೆ ತರಬೇಕಾದರೇ ಮುಂದೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

ರಾಜ್ಯದ ಹಲವೆಡೆ ಭ್ರೂಣಹತ್ಯೆ ಪ್ರಕರಣಗಳು ಬೆಳಕಿಗೆ ಬಂದಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ಭ್ರೂಣ ಹತ್ಯೆ ವಿಚಾರದಲ್ಲಿ ನಮ್ಮ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಹದ್ದಿನ ಕಣ್ಣಿಟ್ಟು ಗಮನ ಹರಿಸುತ್ತಿದ್ದಾರೆ. ಎಲ್ಲೆಲ್ಲಿ ಭ್ರೂಣ ಹತ್ಯೆ ಆಗುತ್ತಿತ್ತೋ, ಆ ಎಲ್ಲಾ ಕಡೆಯೂ ದಾಳಿ ಮಾಡಿ ಹಿಡಿದಿದ್ದೇವೆ. ನಮ್ಮ ಇಲಾಖೆಯಿಂದ ತಪ್ಪು ಮಾಡಿದವರನ್ನು ಪತ್ತೆ ಮಾಡುತ್ತೇವೆ. ಕೋರ್ಟ್ ಮೂಲಕ ಶಿಕ್ಷೆ ಆಗಬೇಕು ಎಂದರು.

ಹೆರಿಗೆ ಆಸ್ಪತ್ರೆಗಳಲ್ಲಿ ಹಣ ಪಡೆಯುವ ವಿಚಾರ, ನಮ್ಮ ವ್ಯವಸ್ಥೆಯಲ್ಲಿ ಇಂದಿಗೂ ಇದು ನಡೆಯುತ್ತಿದೆ. ಎಲ್ಲವೂ ಸರಿಯಿದೆ ಎಂದು ನಾನು ಹೇಳೋದಿಲ್ಲ. ಇದನ್ನು ಕೂಡ ಗಮನ ಹರಿಸಿ ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

Key words: Renukaswamy, murder, case, Minister, Dinesh Gundurao