ಮೈಸೂರಿನ ಎನ್.ಆರ್ ಕ್ಷೇತ್ರದ ಕಾನೂನು ಸುವ್ಯವಸ್ಥೆಗೆ ಆದ್ಯತೆ ವಹಿಸಿ-ಬಿಜೆಪಿ ಮುಖಂಡ ಸಂದೇಶ್ ಸ್ವಾಮಿ ಮನವಿ

ಮೈಸೂರು,ಆಗಸ್ಟ್,6,2024 (www.justkannada.in): ಮೈಸೂರು ನಗರದ ನರಸಿಂಹರಾಜ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆಗೆ ಆದ್ಯತೆ  ನೀಡುವಂತೆ ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಪಾಲಿಕೆ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಸಂದೇಶ್ ಸ್ವಾಮಿ( ಸತೀಶ್. ಎಸ್) ಮನವಿ ಮಾಡಿದ್ದಾರೆ.

ಈ ಕುರಿತು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಬಿಜೆಪಿ ಮುಖಂಡ ಸಂದೇಶ್ ಸ್ವಾಮಿ, ಸಾಂಸ್ಕೃತಿಕ ರಾಜಧಾನಿ ಹಾಗೂ ಪಾರಂಪರಿಕ ನಗರ ಮೈಸೂರಿನ ಪೋಲಿಸ್ ಆಯುಕ್ತರಾಗಿ ನೇಮಕವಾಗಿರುವ ತಮಗೆ ಹೃತ್ತೂರ್ವಕ ಅಭಿನಂದನೆಗಳು.

ಮೈಸೂರು ನಗರದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಅತ್ಯಂತ ಹಿಂದುಳಿದಿರುವ ಮತ್ತು ಅತಿಹೆಚ್ಚು ಅಲ್ಪಸಂಖ್ಯಾತರು ವಾಸ ಮಾಡುತ್ತಿರುವ ಹೆಗ್ಗಳಿಕೆ ನರಸಿಂಹರಾಜ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ನಾನು ಮೂರು ಬಾರಿ ವಿಧಾನಸಭೆಗೆ ಸ್ಪರ್ಧಿಸಿದ್ದೆನು. ಮೂರು ಬಾರಿ ಇಲ್ಲಿನ ವಾರ್ಡ್ ನಿಂದ ಮಹಾನಗರಪಾಲಿಕೆಗೆ ಆಯ್ಕೆಯಾಗಿ ಸದಸ್ಯನಾಗಿ ಮತ್ತು ಮಹಾಪೌರನಾಗಿ ಸೇವೆ ಸಲ್ಲಿಸಿದ್ದೇನೆ. ಇಂದಿಗೂ ಕ್ಷೇತ್ರದ ಜನರ ನಿಕಟ ಸಂಪರ್ಕವಿದೆ.

ಈ ಕ್ಷೇತ್ರವು ಆಗಾಗ್ಗೆ ಕೋಮು ಗಲಭೆ ಉಂಟಾಗಿ ಸೂಕ್ಷ್ಮ ಪ್ರದೇಶವೂ ಆಗಿದೆ. ಅಲ್ಲದೆ ಈ ಭಾಗದಲ್ಲಿ ಗಾಂಜಾ ಸೇವನೆ, ಮದ್ಯ ಸೇವನೆ, ಸಾರ್ವಜನಿಕ ಜಾಗದಲ್ಲಿ ಧೂಮಪಾನ ಮಾಡುವುದು ಹೆಚ್ಚಾಗಿ ಕಂಡುಬಂದಿದೆ. ವಾಹನಗಳ ಚಾಲನೆಯಲ್ಲಿ ಅದರಲ್ಲೂ ದ್ವಿಚಕ್ರ ಸವಾರರು ಸಂಖ್ಯಾ ಫಲಕವಿಲ್ಲದೆ ವಾಹನ ಚಲಾಯಿಸುವುದು, ಮೂವರು ಸವಾರಿ ಮಾಡುವುದು, ವೇಗವಾಗಿ ಚಲಿಸುವುದು ಹೀಗೆ ಸಂಚಾರಿ ನಿಯಮ ಪಾಲಿಸದಿರುವುದನ್ನು ಕಾಣಬಹುದು. ಸಮಾಜ ಘಾತಕ ಕೃತ್ಯಗಳಲ್ಲಿ ಭಾಗವಹಿಸುತ್ತಾ ಕಾನೂನಿಗೆ ಗೌರವ ಕೊಡದೆ ತಮ್ಮದೇ ಹಾದಿಯಲ್ಲಿ ನಡೆಯುತ್ತಿದ್ದಾರೆ. ಆದ್ದರಿಂದ ನರಸಿಂಹರಾಜ ಕ್ಷೇತ್ರದಲ್ಲಿ ಕಾನೂನು – ಸುವ್ಯವಸ್ಥೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಿ ಮೈಸೂರಿನ ಇತರ ಕ್ಷೇತ್ರಗಳಂತೆ ಜನರು ಬದುಕುವಂತೆ ವಾತಾವರಣವನ್ನು ನಿರ್ಮಾಣ ಮಾಡಲು ತಾವು ವಿಶೇಷವಾಗಿ ಗಮನ ಹರಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂದೇಶ್ ಸ್ವಾಮಿ ಮನವಿ ಮಾಡಿದ್ದಾರೆ.

Key words: Sandesh Swamy,  law and order, NR constituency, Police Commissioner