ಶಿರೂರು ಬಳಿ ಭೂಕುಸಿತಕ್ಕೆ ಹಲವು ಮಂದಿ ಸಾವು ತೀವ್ರ ಆಘಾತವನ್ನುಂಟು ಮಾಡಿದೆ- ಕೇಂದ್ರ ಸಚಿವ ಹೆಚ್.ಡಿಕೆ

ಬೆಂಗಳೂರು,ಜುಲೈ,17,2024 (www.justkannada.in): ಅಂಕೋಲಾ ಶಿರೂರು ಬಳಿ ಹೆದ್ದಾರಿಯಲ್ಲಿ ಭಾರಿ ಗುಡ್ಡ ಕುಸಿದು ಹತ್ತು ಮಂದಿ ನಾಪತ್ತೆಯಾದ ಘೋರ ದುರಂತದ ಸ್ಥಳದಲ್ಲಿ ಐದು ಶವಗಳು ಪತ್ತೆಯಾಗಿದೆ ಎನ್ನಲಾಗಿದ್ದು ಘಟನೆ ಬಗ್ಗೆ ಕೇಂದ್ರ ಸಚಿವ ಹೆ‍ಚ್.ಡಿ ಕುಮಾರಸ್ವಾಮಿ  ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಹೆಚ್.ಡಿ ಕುಮಾರಸ್ವಾಮಿ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕು ಶಿರೂರು ಬಳಿ ಹೆದ್ದಾರಿಯಲ್ಲಿ ಭೂಕುಸಿತಕ್ಕೆ ಸಿಲುಕಿ ಇಬ್ಬರು ಮಕ್ಕಳು ಸೇರಿ ಹಲವರು ಸಾವನ್ನಪ್ಪಿರುವ ಧಾರುಣ ಘಟನೆ ನನಗೆ ತೀವ್ರ ಆಘಾತ ಉಂಟು ಮಾಡಿದೆ. ಮೃತರೆಲ್ಲರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ದುಃಖ ಭರಿಸುವ ಶಕ್ತಿಯನ್ನು ಭಗವಂತ ಆ ಕುಟುಂಬಗಳಿಗೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

ಈಗಾಗಲೇ ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಜತೆ ದೂರವಾಣಿಯಲ್ಲಿ ಮಾತನಾಡಿ; ಪರಿಹಾರ ಕಾರ್ಯ, ಮೃತರ ಕುಟುಂಬಗಳಿಗೆ ನೆರವು ಇತ್ಯಾದಿ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇನ್ನೂ ಹಲವೆಡೆ ಭೂಕುಸಿತವಾಗುವ ಆತಂಕವಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಹೆದ್ದಾರಿ ಬದಿ ಸಣ್ಣಪುಟ್ಟ ಗೂಡಂಗಡಿ, ಹೋಟೆಲ್ ಇಟ್ಟುಕೊಂಡು ಬದುಕು ಕಟ್ಟಿಕೊಂಡಿರುವ ಜನತೆಯಲ್ಲಿ ನನ್ನ ಕಳಕಳಿಯ ಮನವಿ..

ಮಳೆಗಾಲ, ಇನ್ನಿತರೆ ಅಪಾಯಕಾರಿ ಸಂದರ್ಭಗಳಲ್ಲಿ ಭೂ ಕುಸಿತದ ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕು. ರಸ್ತೆಬದಿ ಗುಡ್ಡಗಳ ಕೆಳಗೆ ವಾಸಿಸುವ, ಸಣ್ಣಪುಟ್ಟ ವ್ಯಾಪಾರ ಮಾಡಿಕೊಳ್ಳುವವರು ಆದಷ್ಟು  ಮುನ್ನೆಚ್ಚರಿಕೆ ವಹಿಸಬೇಕು ಎಂಬುದು ನನ್ನ ಮನವಿ ಎಂದು ಟ್ವೀಟ್ ಮೂಲಕ ಹೆಚ್.ಡಿಕೆ ಮನವಿ ಮಾಡಿದ್ದಾರೆ.

Key words:  Shiruru, many people, dead, Union Minister HDK