ದಕ್ಷಿಣ ಶಿಕ್ಷಕರ ಕ್ಷೇತ್ರ: ಮೈತ್ರಿ ಅಭ್ಯರ್ಥಿಗೆ ಗೆಲುವು: ಮರಿತಿಬ್ಬೇಗೌಡರಿಗೆ ಸೋಲು.

ಮೈಸೂರು,ಜೂನ್,6,2024 (www.justkannada.in):  ವಿಧಾನಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ  ಜಯ ಸಾಧಿಸಿದ್ದು ಕಾಂಗ್ರೆಸ್ ಅಭ್ಯರ್ಥಿ  ಮರಿತಿಬ್ಬೇಗೌಡರಿಗೆ ಹೀನಾಯ ಸೋಲಾಗಿದೆ.

ಮೈಸೂರಿನಲ್ಲಿ ಲೋಕಸಭಾ ಬಳಿಕ ಕಾಂಗ್ರೆಸ್‌ ಗೆ ಮತ್ತೊಂದು ಹೊಡೆತ ಬಿದ್ದಿದ್ದು, ಒಂದೇ ದಿನದ ಅಂತರದಲ್ಲಿ ಸಿಎಂ ಸಿದ್ದರಾಮಯ್ಯಗೆ ಎರಡು ಬಾರಿ ಮುಖಭಂಗವಾಗಿದೆ.  ಮೊನ್ನೆ ಮೈಸೂರು-ಕೊಡಗು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯವಾಗಿ ಸೋತಿತ್ತು.  ಇಂದು ದಕ್ಷಿಣ ಶಿಕ್ಷಕರ ಚುನಾವಣೆಯಲ್ಲಿ ಸೋಲನುಭವಿಸಿದೆ

ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಮೈತ್ರಿ ಪಕ್ಷದ ಅಭ್ಯರ್ಥಿ ವಿವೇಕಾನಂದ ಗೆಲುವಿನ ನಗೆ ಬೀರುತ್ತಿದ್ದಾರೆ. ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಮೈತ್ರಿ ಪಕ್ಷ ಗೆಲವು ಸಾಧಿಸಿದೆ.

ಮರಿತಿಬ್ಬೇಗೌಡರು  ಸತತ ನಾಲ್ಕು ಬಾರಿ ಗೆದ್ದಿದ್ದರು. ಕಳೆದ ಬಾರಿ ಜೆಡಿಎಸ್ ನಿಂದ ಗೆದ್ದು ನಂತರದ ದಿನಗಳಲ್ಲಿ ಕಾಂಗ್ರೆಸ್‌ಗೆ ಬಂದಿದ್ದರು.  ಇದೀಗ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಗೆಲುವಿನ ನಾಗಾಲೋಟಕ್ಕೆ ಮೈತ್ರಿ ಅಭ್ಯರ್ಥಿ ವಿವೇಕಾನಂದ ಬ್ರೇಕ್ ಹಾಕಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಕೆ.ವಿವೇಕಾನಂದ ಅವರು ಮೊದಲ ಸುತ್ತಿನ  ಮತ ಎಣಿಕೆಯಲ್ಲಿ 1396 ಮತಗಳಿಂದ ಮುನ್ನಡೆ ಸಾಧಿಸಿದ್ದರು. ನಂತರ 2ನೇ ಸುತ್ತಿನಲ್ಲಿ 3258 ಮತಗಳ ಅಂತರ ಕಾಯ್ದುಕೊಂಡ ಮೈತ್ರಿ ಅಭ್ಯರ್ಥಿ ವಿವೇಕಾನಂದ. ಮೈತ್ರಿ ಅಭ್ಯರ್ಥಿ ವಿವೇಕಾನಂದಾಗೆ 7916 ಮತಗಳು. ಕಾಂಗ್ರೆಸ್ ಅಭ್ಯರ್ಥಿ‌ ಮರಿತಿಬ್ಬೇಗೌಡರಿಗೆ 4658 ಮತಗಳು. ಈ ಮೂಲಕ ಕೆ.ವಿವೇಕಾನಂದ ಗೆಲುವಿನ ಸನಿಹದಲ್ಲಿದ್ದರು.

ಇದೀಗ ಮೈತ್ರಿ ಅಭ್ಯರ್ಥಿ ವಿವೇಕಾನಂದ ಅವರು ಮೊದಲ ಪ್ರಾಶಸ್ತ್ಯ ಮತದಲ್ಲಿ ಗೆಲುವು ಸಾಧಿಸಿದ್ದಾರೆ.  ಮೈತ್ರಿ ಅಭ್ಯರ್ಥಿಗೆ ವಿವೇಕಾನಂದಗೆ 10,823 ಮತಗಳು, ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡಗೆ 6201 ಮತಗಳು, ವಾಟಾಳ್ ನಾಗರಾಜ್ ಗೆ 84 ಮತಗಳು ಲಭಿಸಿವೆ. 4622 ಮತಗಳ ಭಾರಿ ಅಂತರರಿಂದ ವಿವೇಕಾನಂದ ಗೆಲುವನ್ನ ದಾಖಲಿಸಿದ್ದಾರೆ. 1049 ಅಸಿಂಧು ಮತಗಳಾಗಿವೆ.

Key words: South , Teachers, Constituency, JDS, wins