ಜೂನ್ 23 ರಂದು ʼಕೇಳದ ಕಿವಿಗಳು ಹೇಳಿದ ಕತೆʼ ಕೃತಿ ಬಿಡುಗಡೆ

ಮೈಸೂರು,ಜೂನ್,20,2024 (www.justkannada.in): ಸುಚೇತ ಕೆ.ಎಸ್‌. ಅವರ ಎರಡನೇ ಕೃತಿ ʼಕೇಳದ ಕಿವಿಗಳು ಹೇಳಿದ ಕತೆʼಯ ಲೋಕಾರ್ಪಣೆ ಕಾರ್ಯಕ್ರಮವನ್ನು  ಜೂನ್ 23 ರ ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಕುವೆಂಪು ನಗರದ ರಂಗಾಂತರಂಗದಲ್ಲಿ ( ಜೆ.ಎಸ್.‌ ಎಸ್‌. ಕಾನೂನು ಕಾಲೇಜು ಹಿಂಭಾಗ) ಏರ್ಪಡಿಸಲಾಗಿದೆ.

ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿ ಪ್ರೊ. ಎಂ. ಪುಷ್ಪವತಿ ಅವರು ಕಾರ್ಯಕ್ರಮವನ್ನ ಉದ್ಘಾಟಿಸಿ, ಕೃತಿ ಕುರಿತು ಮಾತನಾಡಲಿದ್ದಾರೆ. ಹುಟ್ಟುವಾಗಲೇ ಬಂದ ದೃಷ್ಟಿದೋಷ ಮೆಟ್ಟಿ ನಿಂತು ಕನ್ನಡ ಸಾಹಿತ್ಯದಲ್ಲಿ ಎಂಎ ಮಾಡಿ ಪಿಎಚ್.‌ ಡಿ. ಪಡೆದು ಸಹಾಯಕ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಲೇಖಕ ಡಾ. ನಾಗರಾಜ ಪಿ. ವಿ. ಅವರು ಕೃತಿ ಕುರಿತು ಮಾತನಾಡಲಿರುವುದು ಈ ಕಾರ್ಯಕ್ರಮದ ಮತ್ತೊಂದು ವಿಶೇಷ.

ಅನುವಾದಕರಾಗಿ ಹಾಗೂ ವಿಮರ್ಶಕರಾಗಿ ಗಣನೀಯ ಸಾಧನೆ ಮಾಡಿರುವ ಹಿರಿಯ ಲೇಖಕ ಹಾಗೂ ನಿವೃತ್ತ ಪ್ರಾಧ್ಯಾಪಕರಾದ ಓ.ಎಲ್.‌ ನಾಗಭೂಷಣಸ್ವಾಮಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಲದ್ದಾರೆ. ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ನಿವೃತ್ತ ವಿಜ್ಞಾನಿ ಹಾಗೂ ಮಹಿಳಾ ಹೋರಾಟಗಾರ್ತಿ ಡಾ. ಇ. ರತಿರಾವ್‌ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಕೃತಿ ಹೊರ ತಂದಿರುವ ಬೆಂಗಳೂರಿನ ಅನ್ನಪೂರ್ಣ ಪಬ್ಲಿಕೇಷನ್‌ ಹೌಸ್‌ ನ ಪ್ರಕಾಶಕ ಸುರೇಶ್‌ ಬಿ.ಕೆ. ಅವರು ಉಪಸ್ಥಿತರಿದ್ದು ತಮ್ಮ ಪ್ರಕಾಶನದ ಪ್ರಕಟಣೆಗಳ ಪ್ರದರ್ಶನ ಏರ್ಪಡಿಸಲಿದ್ದಾರೆ. ಕಾರ್ಯಕ್ರಮವನ್ನು ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ರಂಗವಲ್ಲಿ, ಸಮಾಜವಾದಿ ಅಧ್ಯಯನ ಕೇಂದ್ರ ಹಾಗೂ ರಂಗಾಂತರಂಗ ಇವುಗಳ ಸಹಯೋಗದಲ್ಲಿ ಸಂಘಟಿಸಲಾಗಿದೆ.

Key words:  Suchetha K.S, book, release, mysore