ಮರು ಮೌಲ್ಯಮಾಪನದಲ್ಲಿ ಹೆಚ್ಚಿನ ಅಂಕ ಬಂದ್ರೂ ಸಿಗದ ಸೀಟು: ವಿದ್ಯಾರ್ಥಿನಿಯ ಅಳಲು.

ಮೈಸೂರು,ಜೂನ್,7,2024 (www.justkannada.in): ಮೌಲ್ಯಮಾಪಕರ ಬೇಜವಾಬ್ದಾರಿತನದಿಂದಾಗಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯೊಬ್ಬರು ಮರು ಮೌಲ್ಯಮಾಪನದಲ್ಲಿ ಹೆಚ್ಚಿನ ಅಂಕ ಪಡೆದರೂ ಸಹ ಕಾಲೇಜು ಪ್ರವೇಶಾತಿಗೆ ಸಮಯ ಮುಗಿದಿರುವ ಹಿನ್ನೆಲೆ ಸೀಟು ಸಿಗದೇ ಕಂಗಾಲಾಗಿದ್ದಾರೆ.

ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕಿನ ಕೊಡಗಳ್ಳಿ ಗ್ರಾಮದ ಶ್ರೀನಿವಾಸ್-ಸುಮ ದಂಪತಿ ಪುತ್ರಿಯಾಗಿರುವ ಶ್ರಾವ್ಯ ಎಸ್ ಎಸ್ ಎಸಲ್ ಸಿ ಪರೀಕ್ಷೆ ಬರೆದು 545 ಗಳಿಸಿದ್ದರು. ಆದರೆ ಫಲಿತಾಂಶ ಪ್ರಕಟಗೊಂಡಾಗ ನಿರೀಕ್ಷೆಗೆ ತಕ್ಕಂತೆ ಅಂಕಗಳು ಬರದ ಕಾರಣ ವಿದ್ಯಾರ್ಥಿನಿ ಶ್ರಾವ್ಯ ತೀವ್ರ ಮನನೊಂದಿದ್ದರು.

ಬಳಿಕ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದು, ಈ ವೇಳೆ   606 ಅಂಕ ಗಳಿಸಿದ್ದಾರೆ.  ಮೌಲ್ಯಮಾಪನ ವೇಳೆ ಮೌಲ್ಯಮಾಪಕರ ಬೇಜವಾಬ್ದಾರಿತನದಿಂದ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿನಿ ಶ್ರಾವ್ಯಗೆ ಮರು ಮೌಲ್ಯಮಾಪನದ ಬಳಿಕ 606 ಅಂಕ ಲಭ್ಯವಾಗಿದೆ.

ಆದರೆ ಪ್ರತಿಷ್ಠಿತ ಕಾಲೇಜಿಗೆ ಮುಂದಿನ ವ್ಯಾಸಂಗಕ್ಕೆ ಸೇರ ಬಯಸಿದ್ದ ಶ್ರೇಯಾಗೆ ತೊಂದರೆಯಾಗಿದೆ. ಈ‌ ಮೊದಲು ಕಡಿಮೆ ಅಂಕ ಬಂದಿದ್ದರಿಂದ ಬಯಸಿದ ಕಾಲೇಜಿನಲ್ಲಿ ಸೀಟು ಸಿಕ್ಕಿರಲಿಲ್ಲ. ಇದೀಗ ಹೆಚ್ಚು ಅಂಕ ಬಂದಿದ್ದರೂ ಕಾಲೇಜು ಪ್ರವೇಶಾತಿಗೆ ಸಮಯ ಮುಗಿದಿರುವುದರಿಂದ ವಿದ್ಯಾರ್ಥಿನಿ ಕಂಗಾಲಾಗಿದ್ದಾರೆ.

ಈ ಕುರಿತು ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ವಿದ್ಯಾರ್ಥಿನಿ ಶ್ರೇಯಾ ಮತ್ತು ಪೋಷಕರು ಹಾಗು ಸಂಬಂಧಿಕರು ಅಳಲು ತೋಡಿಕೊಂಡಿದ್ದಾರೆ. ಮುಂದೆ ಯಾವುದೇ ವಿದ್ಯಾರ್ಥಿಗೂ ಈ ರೀತಿ ಆಗದಂತೆ ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಮನವಿ ಮಾಡಿದ್ದಾರೆ.

Key words: mysore-SSLC-Student-Revaluation