ST ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣ ಸಿಬಿಐಗೆ ವಹಿಸಿ- ಬಿವೈ ವಿಜಯೇಂದ್ರ ಆಗ್ರಹ.

ಶಿವಮೊಗ್ಗ,ಮೇ,30,2024 (www.justkannada.in): ST ನಿಗಮದ ಅಧಿಕಾರಿ ಚಂದ್ರಶೇಖರ್  ಆತ್ಮಹತ್ಯೆ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಿ. ಇಲ್ಲದಿದ್ದರೇ ಬಿಜೆಪಿ  ಹೋರಾಟ ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಗ್ರಹಿಸಿದರು.

ಶಿವಮೊಗ್ಗದ ಕೆಂಚಪ್ಪ ಬಡಾವಣೆಗೆ ಭೇಟಿ‌ ನೀಡಿದ ಬಿವೈ ವಿಜಯೇಂದ್ರ ಮೃತ ಅಧಿಕಾರಿ ಚಂದ್ರಶೇಖರ್ ಅವರ  ಕುಟುಂಬಕ್ಕೆ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿಗಮದಲ್ಲಿ ದೊಡ್ಡ ಮಟ್ಟದ ಹಣಕಾಸಿನ ಅವ್ಯವಹಾರ ನಡೆದಿರುವುದು ಸ್ಪಷ್ಟವಾಗಿದೆ. ಎಸ್.ಟಿಗೆ ಮೀಸಲು ಇಟ್ಟ ಹಣ ಪೋಲಾಗಿರುವುದು ಸ್ಪಷ್ಟವಾಗಿ‌ ಕಾಣುತ್ತಿದೆ. ಪ್ರಕರಣದ ಆಳ ಮತ್ತು ಅಗಲ ಪತ್ತೆ ಹಚ್ಚಬೇಕು.‌ಇದರಲ್ಲಿ ಮೂರ್ನಾಲ್ಕು ಜನ ಅಧಿಕಾರಿಗಳು ಸೇರಿಕೊಂಡು ನೂರಾರು ಕೋಟಿ ಅವ್ಯವಹಾರ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಪ್ರಕರಣ ವನ್ನ ಸಿಬಿಐಗೆ ವಹಿಸಬೇಕು. 25 ಕೋಟಿ ಹಣ ತೆಲಂಗಾಣಕ್ಕೆ ಹೋಗಿತ್ತಾ..?  ಹಣ ವರ್ಗಾವಣೆಯು ಸಚಿವರ ಅನುಮತಿ ಇಲ್ಲದೆ ನಡೆಯಲ್ಲ. ಇದು ಸಣ್ಣ ಪ್ರಕರಣ ಅಲ್ಲ. ದೊಡ್ಡ ಕುಳಗಳೂ ಭಾಗಿಯಾಗಿವೆ. ಕಾಂಗ್ರೆಸ್ ಘಟಾನುಘಟಿ ನಾಯಕರ ಕೈವಾಡವಿದೆ.  ಬೇರ ಪ್ರಕರಣ ಮುಚ್ಚಿ ಹಾಕಲು ಸರ್ಕಾರದ ಹುನ್ನಾರ ನಡೆಸುತ್ತಿದೆ. ವಾರದೊಳಗೆ ಸಿಬಿಐ ತನಿಖೆಗೆ ನೀಡದಿದ್ದರೇ ಹೋರಾಟ ಮಾಡಬೇಕಾಗುತ್ತದೆ ಎಂದು ಬಿವೈ ವಿಜಯೇಂದ್ರ ಎಚ್ಚರಿಕೆ ನೀಡಿದರು.

Key words: ST Corporation, officer, suicide, CBI,  BY Vijayendra