ನಾಳೆ ಯುಗಾದಿ ಹಬ್ಬದ ಸಂಭ್ರಮ: ಗಗನಕ್ಕೇರಿದ ಹೂ, ಹಣ್ಣುಗಳ ಬೆಲೆ

ಬೆಂಗಳೂರು, ಮಾರ್ಚ್​ 29,2025 (www.justkannada.in):  ನಾಳೆ ಯುಗಾದಿ ಹಬ್ಬದ ಸಂಭ್ರಮವಾಗಿದ್ದು, ರಾಜ್ಯಾದ್ಯಂತ ಖರೀದಿ ಭರಾಟೆ ಜೋರಾಗಿದೆ. ಈ ಮಧ್ಯೆಯೇ  ಬೆಂಗಳೂರಿನ ಕೆ.ಆರ್ ಮಾರ್ಕೆಟ್ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಹೂ, ಹಣ್ಣುಗಳ ಬೆಲೆ ಏರಿಕೆಯಾಗಿದೆ.  ಯುಗಾದಿ ಹಬ್ಬ ಹಿನ್ನೆಲೆಯಲ್ಲಿ ಹೂವು, ಹಣ್ಣು-ಹಂಪಲು, ತರಕಾರಿಯ ಬೇಡಿಕೆ ಹೆಚ್ಚಾಗಿದ್ದು, ಹಣ್ಣುಗಳ ಬೆಲೆ ಕೊಂಚ ದುಬಾರಿಯಾಗಿದೆ.  ಹೂವುಗಳ ದರ ಗಗನಕ್ಕೇರಿದೆ. ಇನ್ನು ತರಕಾರಿ ದರ ಯಥಾಸ್ಥಿತಿ ಇದೆ. ಬೆಲೆ ಏರಿಕೆಯಾದರೂ ಸಹ ಗ್ರಾಹಕರು  ಖರೀದಿಯಲ್ಲಿ ತೊಡಗಿದ್ದಾರೆ.

ಹೂವುಗಳ ಬೆಲೆಗಳನ್ನ ನೋಡುವುದಾದರೇ  ಕೆಜಿಗೆ 600 ರೂ ಇದ್ದ ಮಲ್ಲಿಗೆ 1200 ರೂಗೆ ತಲುಪಿದೆ. ಕನಕಾಂಬರ 600 ರೂ.ನಿಂದ 1000ರೂ.ಗೆ ಏರಿಕೆಯಾಗಿದೆ. ಗುಲಾಬಿ 100ರೂ. ನಿಂದ 300 ರೂ. ಗೆ, ಸಂಪಿಗೆ 200 ರೂ.ನಿಂದ 400  ರೂ.ಗೆ ಏರಕೆಯಾಗಿದೆ. ಹಾಗೆಯೇ ಸೇವಂತಿಗೆ 200 ರೂ. ನಿಂದ 360 ರೂ.ಗೆ , ಚೆಂಡು ಹೂವು       10 ರೂ.ನಿಂದ 40 ರೂಗೆ ಏರಿಕೆಯಾಗಿದೆ.

ಹಣ್ಣುಗಳ ಬೆಲೆ ನೋಡುವುದಾದರೇ  ಕೆಜಿ ಸೇಬಿನಹಣ್ಣಿಗೆ  200ರೂ. ನಿಂದ 240 ಏರಿಕೆಯಾದರೇ, ದಾಳಿಂಬೆ 150 ರೂ.ನಿಂದ 250 ರೂ.ಗೆ ಹೆಚ್ಚಳವಾಗಿದೆ. ಕಿತ್ತಳೆ 100 ರೂ.ನಿಂದ 120 ರೂ.ಗೆ, ದ್ರಾಕ್ಷಿ 80ರೂ.ನಿಂದ 120 ರೂ.ಗೆ , ಮಾವು150ರೂ.ನಿಂದ 200 ರೂ.ಗೆ, ಬಾಳೆ ಹಣ್ಣು 80ರೂ.ನಿಂದ 100 ರೂ.ಗೆ ಏರಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Ugadi festival, tomorrow,  Prices, flowers, fruits