ಅಧಿಕಾರಿಗಳೇ ಹಗರಣ ಮಾಡಿದ್ದಾರೆ ಅಂದ್ರೆ ಬಿ. ನಾಗೇಂದ್ರ ರಾಜೀನಾಮೆ ನೀಡಿದ್ದೇಕೆ..? ಬಿವೈ ವಿಜಯೇಂದ್ರ

ಬಳ್ಳಾರಿ, ಜುಲೈ 20,2024 (www.justkannada.in): ಅಧಿಕಾರಿಗಳೇ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮಾಡಿದ್ದಾರೆ ಎನ್ನುತ್ತಿದ್ದಾರೆ.  ಹಾಗಾದರೇ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ ನೀಡಿದ್ದೇಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರಶ್ನಿಸಿದರು.

ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ನಡೆದಿರುವುದನ್ನು ಸಿಎಂ ಸಿದ್ದರಾಮಯ್ಯ ಸದನದಲ್ಲೇ ಒಪ್ಪಿಕೊಂಡಿದ್ದಾರೆ  ವಾಲ್ಮೀಕಿ ನಿಗಮ ಹಗರಣದಲ್ಲಿ ನಾಗೇಂದ್ರ ಹಾಗೂ ಬಸನಗೌಡ ದದ್ದಲ್ ​ರನ್ನು ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ರಕ್ಷಿಸುತ್ತಿದ್ದಾರೆ ಎಂದರು.

ಸೋಮವಾರದ ಬಳಿಕ ಸದನದಲ್ಲಿ ಮುಡಾ ಹಗರಣದ ಬಗ್ಗೆ ಚರ್ಚೆ ಮಾಡುತ್ತೇವೆ. ನಿಯಮವನ್ನು ಗಾಳಿಗೆ ತೂರಿಸಿ ಸಿಎಂ ಕುಟುಂಬಸ್ಥರು ನಿವೇಶನ ಪಡೆದಿದ್ದಾರೆ. ಹಗರಣವನ್ನು ಬೆಳಕಿಗೆ ತಂದ ಆರ್​ಟಿಐ ಕಾರ್ಯಕರ್ತರನ್ನು ಜೈಲಿಗೆ ಹಾಕುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಆಡಳಿತ ನೋಡಿ ಆಶ್ಚರ್ಯ ಪಡುವಂತಾಗಿದೆ ಎಂದು ಬಿವೈ ವಿಜಯೇಂದ್ರ ಕಿಡಿಕಾರಿದರು.

ನಾಗೇಂದ್ರ ಬಾಯಿ ಬಿಟ್ಟರೆ ಹಗರಣಗಳ ಮೂಲ ಸಿಎಂ ಹಾಗೂ ಡಿಸಿಎಂ ಬುಡಕ್ಕೆ ಬರುತ್ತದೆ. ಸದನದ ನಡುವೆಯೂ‌ ಪತ್ರಿಕಾಗೋಷ್ಠಿ ಮಾಡಿ ತಮ್ಮನ್ನು ತಾವೇ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಳ್ಳುತ್ತಾರೆ. ಈ ಹಗರಣಕ್ಕೂ ಹಣಕಾಸಿನ ಇಲಾಖೆ ಸಂಬಂಧ ಇಲ್ಲ ಎಂದು ಅವರು ಹೇಳುತ್ತಾರೆ. ಸಂಬಂಧ ಇದೆ ಅಂದರೆ ಸಿಎಂ ಬುಡಕ್ಕೇ ಬರುತ್ತದೆ. ಯಾವುದೇ ರಾಜ್ಯದ ಸಿಎಂ ಅಸಮರ್ಥ ಇದ್ದರೆ ಅಧಿಕಾರಿಗಳು ದುರುಪಯೋಗ ಮಾಡಿಕೊಳ್ಳುತ್ತಾರೆ ಎಂದು ಬಿವೈ ವಿಜಯೇಂದ್ರ ಟೀಕಿಸಿದರು.

Key words: Valmiki Corporation, scam, BJP, BY Vijayendra