ಜು.21ಕ್ಕೆ ವಿಜಯಾ ದಬ್ಬೆ  ಸಾಹಿತ್ಯ ಪ್ರಶಸ್ತಿ ಪ್ರದಾನ

Vijaya Dabbe Literary Award to be presented on July 21 at Mysore

 

ಮೈಸೂರು, ಜು.16,2024: (www.justkannada.in news) ಸಮತಾ ಅಧ್ಯಯನ ಕೇಂದ್ರದ ವತಿಯಿಂದ  ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಜುಲೈ 21 ರಂದು ಆಯೋಜಿಸಲಾಗಿದೆ.

ಭಾನುವಾರ ಬೆಳಗ್ಗೆ 10.30ಕ್ಕೆ ಸರಸ್ವತಿ ಪುರಂನ ಕಾಮಾಕ್ಷಿ ಆಸ್ಪತ್ರೆ ‌ಸಮೀಪದ ರೋಟರಿ‌ ಪಶ್ಚಿಮ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.

ಹಂಪಿ ಕನ್ನಡ ವಿವಿ ನಿವೃತ್ತ ಪ್ರಾಧ್ಯಾಪಕಿ ಡಾ. ಎಂ.ಉಷಾ ಅವರಿಗೆ 2024ನೇ ಸಾಲಿನ ಪ್ರಶಸ್ತಿಯನ್ನು ಪುಣೆಯ ಸಿಂಬಯಾಸಿಸ್ ಕಾನೂನು ಕಾಲೇಜು ಡೀನ್  ಡಾ.ಶಶಿಕಲಾ ಗುರುಪುರ ಅವರು ಪ್ರದಾನ ಮಾಡುವರು.

ಶಿವಮೊಗ್ಗದ ‘ಅಹರ್ನಿಶಿ’ ಪ್ರಕಾಶನ  ಪ್ರಕಟಿಸಿರುವ ಉಷಾ ಅವರ  ‘ಬಾಳ‌ ಬಟ್ಟೆ’ ಕಾದಂಬರಿಯನ್ನು 25 ಸಾವಿರ ರೂ. ನಗದು ಬಹುಮಾನ, ಫಲಕವನ್ನು ಒಳಗೊಂಡ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ವಿಜಯಾದಬ್ಬೆ ಅವರ ಒಡನಾಡಿಯಾಗಿದ್ದ ನಿವೃತ್ತ ಪ್ರಾಂಶುಪಾಲ ಡಾ.ಟಿ. ಸುಬ್ರಹ್ಮಣ್ಯಂ ಅವರು ತಮ್ಮ ಮತ್ತು‌ ವಿಜಯಾ ಅವರ ಒಡನಾಟದ ಕುರಿತು ಮಾತನಾಡುವರು. ಕೇಂದ್ರದ ಅಧ್ಯಕ್ಷೆ ಡಾ. ಸಬಿಹಾ ಭೂಮಿಗೌಡ ಅವರು ಅಧ್ಯಕ್ಷತೆ ವಹಿಸುತ್ತಾರೆ.

ವಿಜಯಾ ದಬ್ಬೆ ಅವರ ಸ್ಮರಣಾರ್ಥ ಆಯೋಜಿಸಿದ್ದ  ರಾಜ್ಯ‌ ಮಟ್ಟದ ಕಾವ್ಯ ಮತ್ತು ಲಲಿತ ಪ್ರಬಂಧ‌ ಸ್ಪರ್ಧೆಗಳಲ್ಲಿ ಬಹುಮಾನ ಪಡೆದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಗುತ್ತದೆ.

20ಕ್ಕೆ ಸಾಹಿತ್ಯ ಕಮ್ಮಟ: 

ಕಾವ್ಯ ಮತ್ತು ಲಲಿತ ಪ್ರಬಂಧ‌ ಸ್ಪರ್ಧೆಗಳಲ್ಲಿ ಬಹುಮಾನ ಪಡೆದವರು ಮತ್ತು ಆಸಕ್ತರಿಗಾಗಿ ಜುಲೈ 20ರ ಶನಿವಾರ ಗಂಗೋತ್ರಿ ಬಡಾವಣೆಯ ಯೂತ್ ಹಾಸ್ಟೆಲ್ ನಲ್ಲಿ ಕಾವ್ಯ ಮತ್ತು ಪ್ರಬಂಧ ಕಮ್ಮಟವನ್ನು ಆಯೋಜಿಸಲಾಗಿದೆ.

ಅಂದು‌ ಬೆಳಗ್ಗೆ 10 ಕ್ಕೆ ಆರಂಭವಾಗುವ ಮೊದಲ ಗೋಷ್ಠಿಯಲ್ಲಿ ಕವಯತ್ರಿಯರಾದ ಎಚ್.ಆರ್.ಸುಜಾತ ಮತ್ತು ಮೌಲ್ಯ ಸ್ವಾಮಿ ಕಾವ್ಯಾನುಸಂಧಾನ ನಡೆಸುವರು. ನಂತರ ನಡೆಯುವ ಪ್ರಬಂಧ ಕಮ್ಮಟದಲ್ಲಿ ಲೇಖಕ ಡಾ.ರಾಜಪ್ಪ ದಳವಾಯಿ ಅವರು ಸಂಪನ್ಮೂಲ ವ್ಯಕ್ತಿಯಾಗಿರುವರು.

ಮಧ್ಯಾಹ್ನ 2 ಕ್ಕೆ ಆರಂಭವಾಗುವ 3 ನೇ ಗೋಷ್ಠಿಯಲ್ಲಿ   ಡಾ. ಶಶಿಕಲಾ ಗುರುಪುರ ಅವರು ‘ಸಂವೇದನಾಶೀಲ ಬರಹ-ಕೆಲವು ಆಯಾಮಗಳು’ ವಿಷಯವಾಗಿ ಶಿಬಿರಾರ್ಥಿಗಳೊಂದಿಗೆ ಸಂವಾದಿಸುವರು.

key words: Vijaya Dabbe, Literary Award, to be presented, on July 21, at Mysore