ಫಲಿತಾಂಶ ಕುಸಿತ, ಕಳಪೆ ಸಾಧನೆ: DDPI ಮತ್ತು BEO ಅಮಾನತ್ತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ವಿಜಯನಗರ,ಜೂನ್,21,2024 (www,justkannaa.in): ವಿಜಯನಗರ ಜಿಲ್ಲೆಯಲ್ಲಿ  ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಕುಸಿತ ಮತ್ತು ಕಳೆ ಸಾಧನೆ ಹಿನ್ನೆಯಲ್ಲಿ ಡಿಡಿಪಿಐ ಮತ್ತು ಬಿಇಒ ಅಮಾನತು ಮಾಡಲು ಸಿಎಂ ಸಿದ್ದರಾಮಯ್ಯ ಸೂಚಿಸಿದರು.

ಸಭೆ ಮಧ್ಯದಲ್ಲೇ ದೂರವಾಣಿ ಮೂಲಕ ಕಾರ್ಯದರ್ಶಿ ಅವರನ್ನು ಸಂಪರ್ಕಿಸಿದ ಸಿಎಂ ಸಿದ್ದರಾಮಯ್ಯ  ಅಮಾನತ್ತಿಗೆ ಸೂಚಿಸಿದರು. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಶೈಕ್ಷಣಿಕವಾಗಿ ಜಿಲ್ಲೆ 10 ನೇ ಸ್ಥಾನದಿಂದ 27  ನೇ ಸ್ಥಾನಕ್ಕೆ ಕುಸಿದಿರುವುದಕ್ಕೆ ಸಿಕ್ಕಾಪಟ್ಟೆ ಸಿಟ್ಟಾದ ಸಿಎಂ, ಇದಕ್ಕೆ ನಿಮ್ಮನ್ನು ಏಕೆ ಹೊಣೆ ಮಾಡಬಾರದು ಎಂದು ಡಿಡಿಪಿಐ ಅವರನ್ನು ಪ್ರಶ್ನಿಸಿದರು.

ಎಸ್ಎಸ್ಎಸ್ಸಿ ಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶ ಪ್ರಮಾಣ ಕುಸಿದಿರುವುದಕ್ಕೆ ನೀವೇ ಕಾರಣ. ನಿಮ್ಮ ಬಿಇಒ ಗಳು, ಶಿಕ್ಷಕರ ಪ್ರಯತ್ನ ಏನು? ಯಾವ ದಿಕ್ಕಿನಲ್ಲಿದೆ? ಈ ಕಳಪೆ ಸಾಧನೆಗೆ ನಿಮ್ಮ ಮೇಲೆ ಏನು ಕ್ರಮ ತೆಗೆದುಕೊಳ್ಳಬೇಕು ಎಂದು ನೀವೇ ಹೇಳಿ ಎಂದು ಡಿಡಿಪಿಐಗೆ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಈ ಬಾರಿ ಶೇ20 ರಷ್ಟು ಗ್ರೇಸ್ ಅಂಕಗಳನ್ನು ಕೊಟ್ಟರೂ ಈ ಮಟ್ಟಕ್ಕೆ ಕುಸಿದಿದ್ದೀರಿ ಎಂದರೆ ನಿಮ್ಮ ಒಟ್ಟು ಸಾಧನೆ ಬಗ್ಗೆ ನಿಮಗೆ ಸಮಾಧಾನ ಇದೆಯೇ ಎಂದು ಪ್ರಶ್ನಿಸಿದರು.

10  ರಿಂದ 27ನೇ ಸ್ಥಾನಕ್ಕೆ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಜಾರಿರುವಾಗ ನಿಮಗೆ ನಾಚಿಕೆ ಆಗಬೇಕಲ್ವಾ ಎಂದು ಸಿಇಒ ಅವರನ್ನು ಪ್ರಶ್ನಿಸಿದರು.

ಶಿಕ್ಷಣ ಇಲಾಖೆ ಕಾರ್ಯದರ್ಶಿ ರಿತೀಶ್ ಅವರಿಗೆ ಸಭೆ ಮಧ್ಯದಲ್ಲೇ ದೂರವಾಣಿ ಮೂಲಕ ಸಂಪರ್ಕಿಸಿದ ಸಿಎಂ ಸಿದ್ದರಾಮಯ್ಯ, ಜಿಲ್ಲೆಯ ಕಳಪೆ ಸಾಧನೆ ಬಗ್ಗೆ ಪ್ರಶ್ನಿಸಿ, ಡಿಡಿಪಿಐ ಮತ್ತು ಬಿಇಒ ಇಬ್ಬರನ್ನೂ ತಕ್ಷಣದಿಂದ ಅಮಾನತ್ತಿನಲ್ಲಿ ಇಡಬೇಕು. ಸಿಇಒ ಅವರಿಗೆ ನೋಟಿಸ್ ನೀಡಬೇಕು ಎಂದು ಸೂಚಿಸಿ ಜಿಲ್ಲೆಯ ಶೈಕ್ಷಣಿಕ ಪ್ರಗತಿ ಬಗ್ಗೆ ಗಂಭೀರವಾಗಿ ಯೋಜನೆಗಳನ್ನು ರೂಪಿಸುವಂತೆ ಸೂಚಿಸಿದರು. ಡಿಡಿಪಿಐ ಅವರನ್ನು ಉಸ್ತುವಾರಿ ಸಚಿವ ಜಮೀರ್ ಅಹಮದ್ ಅವರು ಸಭೆಯಿಂದ ಹೊರಗೆ ನಡೆಯುವಂತೆ ಸೂಚಿಸಿದರು.

ಈ ಮಟ್ಟದ ಫಲಿತಾಂಶದ ಕಾರಣಕ್ಕಾಗಿ ಸಂಬಂಧಪಟ್ಟವರ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ? ಪ್ರತಿ ತಿಂಗಳ ಸಭೆಗಳ ಸಭೆಗಳಲ್ಲಿ ಏನು ಸೂಚನೆ ನೀಡಿದ್ದೀರಿ ಎಂದು CEO ಮತ್ತು ಜಿಲ್ಲಾಧಿಕಾರಿಗೆ ಪ್ರಶ್ನಿಸಿದರು.

ಶಿಕ್ಷಣ ವ್ಯವಸ್ಥೆ ಅತ್ಯಂತ ಕೆಟ್ಟಿದೆ. ಇದನ್ನು ಸರಿಯಾಗಿ ಸುಧಾರಿಸದಿದ್ದರೆ ಸಮಾಜಕ್ಕೆ ದೊಡ್ಡ ಅನ್ಯಾಯ ಮಾಡಿದಂತಾಗುತ್ತದೆ. ಮಕ್ಕಳ ಭವಿಷ್ಯ ಏನಾಗಬೇಕು? ಇದರಲ್ಲಿ ಮಕ್ಕಳ  ತಪ್ಪಿಲ್ಲ. ಡಿಡಿಪಿಐ, ಬಿಇಒ ಮತ್ತು ಶಿಕ್ಷಕ ಸಮೂಹ ಇದರ ಹೊಣೆ ಹೊರಬೇಕಲ್ಲವೇ ಎಂದು ಪ್ರಶ್ನಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳಿಗೆ ಎಷ್ಟು ಬಾರಿ ಭೇಟಿ ನೀಡಿದ್ದೀರಿ? ಶೈಕ್ಷಣಿಕ ವಾತಾವರಣ ಮತ್ತು ಊಟ, ವ್ಯವಸ್ಥೆಯ ಗುಣಮಟ್ಟವನ್ನು ಎಷ್ಟು ಬಾರಿ ಪರಿಶೀಲಿಸಿದ್ದೀರಿ?  ರಾಜ್ಯ ಸರಾಸರಿಗೆ ಹೋಲಿಸಿದರೆ ಜಿಲ್ಲೆಯ ಹಾಸ್ಟೆಲ್ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕಡಿಮೆ ಆಗಿದ್ದು ಏಕೆ ? ಯಾವ ವಿಷಯಗಳಲ್ಲಿ ದುರ್ಬಲ ಇದೆ ಆ ವಿಷಯಗಳಲ್ಲಿ ಪ್ರತ್ಯೇಕ ಕೋಚಿಂಗ್ ವ್ಯವಸ್ಥೆ ಮಾಡಿದ್ದೀರಿ? ಎಷ್ಟು ಮಂದಿ ವಿದ್ಯಾರ್ಥಿಗಳು ರಾತ್ರಿ ಹಾಸ್ಟೆಲ್ ಗಳಲ್ಲೇ ಉಳಿಯುತ್ತಾರೆ? ಎಂದು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ ಯಾವ ಯಾವ ಅಧಿಕಾರಿ ಯಾವ ಯಾವ ಹಾಸ್ಟೆಲ್ ಗಳಲ್ಲಿ ಭೇಟಿ ನೀಡಿದ್ದೀರಿ ? ಭೇಟಿ ನೀಡಿದ್ದರೂ ಇನ್ನೂ ಸಮಸ್ಯೆಗಳು ಏಕೆ ಉಳಿದಿವೆ ಎಂದು ಪ್ರಶ್ನಿಸಿದರು.

ಎಸ್ಟಿ ಹಾಸ್ಟೆಲ್ ಗಳಲ್ಲಿ, ಕ್ರೈಸ್ ಹಾಸ್ಟೆಲ್ ನ ಗಳಲ್ಲಿ ಅಗತ್ಯ ನಾಗರಿಕ ಸೌಲತ್ತುಗಳನ್ನು ಒದಗಿಸದ ಕಾರಣಕ್ಕೆ ಸಮಾಜ ಕಲ್ಯಾಣ ಇಲಾಖೆಯ ಡಿಡಿ ಮಂಜುನಾಥ್ ಅವರಿಗೆ ಲೋಕಾಯುಕ್ತ ದಿಂದ ನೋಟಿಸ್ ನೀಡಿರುವ ಪ್ರಕರಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೆ ತಂದರು.

ಈ ಲೋಪಕ್ಕೆ ರಾಜ್ಯ ಮಟ್ಟದಲ್ಲೇ ಟೆಂಡರ್ ನೀಡುವುದರಿಂದ ಈ ಸಮಸ್ಯೆ ಆಗುತ್ತಿದೆ, ಜಿಲ್ಲೆಗಳಿಗೆ ಸರಬರಾಜು ಆಗುವಾಗ ಲೇಟಾಗುತ್ತಿದೆ ಎನ್ನುವ ಉತ್ತರ ಅಧಿಕಾರಿಗಳಿಂದ ಬಂತು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಜಿಲ್ಲಾ ಮಟ್ಟದಲ್ಲೇ ಟೆಂಡರ್ ಕರೆದು ಸರಬರಾಜು ಮಾಡಲು ಅವಕಾಶ ಮಾಡಿಕೊಡುವ ಬಗ್ಗೆ ಪರಿಶೀಲನೆ ನಡೆಸಲು ಸಿಎಂ ಸಿದ್ದರಾಮಯ್ಯ ಸೂಚಿಸಿದರು.

Key words: Vijayanagar, CM Siddaramaiah, suspension, DDPI and BEO