ನಾಳೆ ಮತ ಎಣಿಕೆ ಹಿನ್ನೆಲೆ ಸೂಕ್ತ ಪೊಲೀಸ್ ಭದ್ರತೆ: 144 ಸೆಕ್ಷನ್ ಜಾರಿ- ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್.

ಬೆಂಗಳೂರು,ಜೂನ್,3,2024 (www.justkannada.in):  ನಾಳೆ ಲೋಕಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯಲಿರುವ ಹಿನ್ನೆಲೆ  ಬೆಂಗಳೂರಿನಲ್ಲಿ ಸೂಕ್ತ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದ್ದು ಮತ ಎಣಿಕೆ ಕೇಂದ್ರದ ಸುತ್ತ  144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದರು.

ಈ ಕುರಿತು ಮಾತನಾಡಿದ ಪೊಲೀಸ್ ಆಯುಕ್ತ ಬಿ.ದಯಾನಂದ್, ಬೆಂಗಳೂರು ನಗರದಲ್ಲಿ 3 ಲೋಕಸಭಾ ಕ್ಷೇತ್ರಗಳಲ್ಲಿ ಮತ ಎಣಿಕೆ ಕಾರ್ಯಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಳೆ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದೆ.  ಮತ ಎಣಿಕೆ ಕೇಂದ್ರಗಳಲ್ಲಿ ಸೂಕ್ತ ಪೊಲೀಸ್​​ ಭದ್ರತೆ ನಿಯೋಜಿಸಲಾಗಿದೆ. ಮೂರು ಹಂತಗಳಲ್ಲಿ ರಕ್ಷಣೆ ಕೊಡಲು ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ.

ಇವಿಎಂ ಮಷಿನ್​​ ಇರುವ ಕೇಂದ್ರಗಳಲ್ಲಿ ಸಿಆರ್​ಪಿಎಫ್ ಭದ್ರತೆ ಒದಗಿಸಲಾಗಿದ್ದು, ರಕ್ಷಣೆಗಾಗಿ ಕೆಎಸ್​ಆರ್​ಪಿ, ಸಿಎಆರ್​ ತುಕಡಿಗಳ ನಿಯೋಜನೆ ಮಾಡಲಾಗಿದೆ. ಕಾನೂನುಸುವ್ಯವಸ್ಥೆ, ಸೂಕ್ತ ರೆಗ್ಯುಲೇಟರಿ ವ್ಯವಸ್ಥೆಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಡಿಸಿಪಿ ಮಟ್ಟದ ಅಧಿಕಾರಿಗಳು ಮೇಲುಸ್ತುವಾರಿ ವಹಿಸುತ್ತಾರೆ. ಮತ ಎಣಿಕೆ ಕೇಂದ್ರಗಳ ಹೊರಗೂ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದ್ದು, ಮತ ಎಣಿಕೆ ಕೇಂದ್ರಗಳ ಸುತ್ತಮುತ್ತ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

Key words: vote counting, security, Police Commissioner, B. Dayanand